ADVERTISEMENT

ಕರ್ತವ್ಯಕ್ಕೆ ಗೈರು: 30 ಸಿಬ್ಬಂದಿ ವಜಾ, ಜಿಲ್ಲೆಯಲ್ಲಿ 147 ಸಾರಿಗೆ ಬಸ್‌ಗಳ ಸಂಚಾರ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 16:24 IST
Last Updated 20 ಏಪ್ರಿಲ್ 2021, 16:24 IST
ಹಾವೇರಿ ನಗರ ಬಸ್‌ ನಿಲ್ದಾಣಕ್ಕೆ ಮಂಗಳವಾರ ಬಂದ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರು ಸಂಚರಿಸಿದರು  –ಪ್ರಜಾವಾಣಿ ಚಿತ್ರ 
ಹಾವೇರಿ ನಗರ ಬಸ್‌ ನಿಲ್ದಾಣಕ್ಕೆ ಮಂಗಳವಾರ ಬಂದ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರು ಸಂಚರಿಸಿದರು  –ಪ್ರಜಾವಾಣಿ ಚಿತ್ರ    

ಹಾವೇರಿ: ಸಾರಿಗೆ ಮುಷ್ಕರ ಬೆಂಬಲಿಸುತ್ತಾ ಕರ್ತವ್ಯಕ್ಕೆ ಗೈರು ಹಾಜರಾಗಿದ್ದ ಹಾವೇರಿ ವಿಭಾಗದ 30 ಪ್ರೊಬೆಷನರಿ ಸಿಬ್ಬಂದಿಯನ್ನು ಮೊದಲ ಹಂತದಲ್ಲಿ ಕೆಲಸದಿಂದ ವಜಾ ಮಾಡಲಾಗಿದೆ.

ಒಟ್ಟಾರೆ 239 ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗದೇ ಇರುವ ಬಗ್ಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿತ್ತು. ಅವರಲ್ಲಿ ಕೆಲವರು ಇಂದು ಕರ್ತವ್ಯಕ್ಕೆ ಹಾಜರಾದರು. ಬಾರದೇ ಇರುವವರ ಪೈಕಿ 30 ಮಂದಿಯನ್ನು ವಜಾ ಮಾಡಲಾಗಿದೆ. ಇವರಲ್ಲಿ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಸೇರಿದ್ದಾರೆ.ನಾಳೆ ಮತ್ತಷ್ಟು ಸಿಬ್ಬಂದಿಯನ್ನು ವಜಾಗೊಳಿಸುವ ಸಾಧ್ಯತೆ ಇದೆ.

ಗರಿಷ್ಠ ಬಸ್‌ ಸಂಚಾರ:6ನೇ ವೇತನ ಆಯೋಗ ಅನ್ವಯಿಸುವಂತೆ ಒತ್ತಾಯಿಸಿ ಏಪ್ರಿಲ್‌ 7ರಿಂದ ರಾಜ್ಯದಾದ್ಯಂತ ನಡೆಯುತ್ತಿರುವ ಸಾರಿಗೆ ಮುಷ್ಕರ ಮಂಗಳವಾರ 14 ದಿನಗಳನ್ನು ಪೂರೈಸಿತು. ಮುಷ್ಕರ ಆರಂಭವಾದ ನಂತರ ಮಂಗಳವಾರದಂದು 147 ಬಸ್‌ಗಳು ಕಾರ್ಯಾಚರಣೆಯಾಗುವ ಮೂಲಕ ಗರಿಷ್ಠ ಬಸ್‌ ಸಂಚಾರವಾಯಿತು. 250 ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು.

ADVERTISEMENT

ಹಾವೇರಿ–24, ಹಿರೇಕೆರೂರು–40, ರಾಣೆಬೆನ್ನೂರು–36, ಹಾನಗಲ್‌–13, ಬ್ಯಾಡಗಿ–24 ಹಾಗೂ ಸವಣೂರು ಘಟಕದಿಂದ 10 ಬಸ್‌ಗಳು ಕಾರ್ಯಾಚರಣೆ ನಡೆಸಿದವು. ಎಲ್ಲಿಯೂ ಬಸ್‌ ಸಂಚಾರಕ್ಕೆ ತೊಡಕಾಗಲಿಲ್ಲ. ತಲಾ ಬಸ್‌ನಲ್ಲಿ ಸರಾಸರಿ 15ರಿಂದ 20 ಜನರು ಪ್ರಯಾಣಿಸುತ್ತಿದ್ದಾರೆ. ಕೋವಿಡ್‌ ಕಾರಣದಿಂದ ಜನರು ಸಂಚರಿಸುವುದು ಕಡಿಮೆಯಾಗಿದೆ. ಏಪ್ರಿಲ್‌ 21ರಂದು 200 ಬಸ್‌ಗಳು ಕಾರ್ಯಾಚರಣೆಯಾಗುವ ನಿರೀಕ್ಷೆಯಿದೆ ಎಂದು ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.