
ಶಿಗ್ಗಾವಿ: ‘ಮನುಕುಲದ ಸರ್ವಾಂಗೀಣ ಏಳ್ಗೆಗಾಗಿ ಭಕ್ತಿ ಮಾರ್ಗ ಅನುಸರಿಸುವುದು ಅವಶ್ಯವಾಗಿದೆ. ಅದರಿಂದ ಶಾಂತಿ ನೆಮ್ಮದಿ ಸಿಗುವ ಜತೆಗೆ ಸರ್ವ ಸಮುದಾಯದಲ್ಲಿ ಒಗ್ಗಟ್ಟು, ಸಮಾನತೆ ಮೂಡಲು ಸಾಧ್ಯವಿದೆ’ ಎಂದು ಅಗಡಿ ಆನಂದವನದ ವಿಶ್ವನಾಥ ಚಕ್ರವರ್ತಿ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬಂಕಾಪುರ ಪಟ್ಟಣದ ಹುಚ್ಚೇಶ್ವರಮಠದ ವಿಶ್ಯಾರಾಧ್ಯ ಸಭಾಮಂಟಪದಲ್ಲಿ ಶುಕ್ರವಾರ ನಡೆದ ಇಷ್ಟಲಿಂಗ ಪೂಜೆ, ರುದ್ರಪಠಣ, ಸಿದ್ಧಾಂತ ಶಿಖಾಮಣಿ ಪಾರಾಯಣ, ಮಹಿಳೆಯರಿಗೆ ಉಡಿ ತುಂಬುವುದು ಹಾಗೂ 20ನೇ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಅವರು ಮಾತನಾಡಿದರು.
ಧರ್ಮದ ತಳಹದಿಯಲ್ಲಿ ಮನುಷ್ಯ ನಡೆದಾಗ ಮಾತ್ರ ಬದುಕು ಹಸನಾಗಲು ಸಾಧ್ಯವಿದೆ. ಪರೋಪಕಾರ, ದಾನ ಧರ್ಮ ಮಾಡುವ ಮೂಲಕ ಬದುಕನ್ನು ಪಾವನ ಮಾಡಿಕೊಳ್ಳಬೇಕು. ಅಧಿಕಾರ, ಅಂತಸ್ತಿನ ವ್ಯಾಮೋಹ ದೂರಾಗಬೇಕು. ಶಾಶ್ವತವಾದ ಸ್ಥಾನಮಾನಗಳನ್ನು ಗಳಿಸುವ ಚಿಂತನೆ ಬೆಳಸಿಕೊಳ್ಳಬೇಕು ಎಂದರು.
ಸೊರಟೂರ ಗುಡ್ಡದಾನ್ವೇರಿ ಮಠದ ಶಿವಯೋಗಿಶ್ವರ ಸ್ವಾಮೀಜಿ ಮಾತನಾಡಿ, ಹುಚ್ಚೇಶ್ವರ ಸ್ವಾಮೀಜಿ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರಮಾಡುವಲ್ಲಿ ಶ್ರಮಿಸಿದ್ದಾರೆ. ಆದರೆ ಮನುಷ್ಯ ಮಾಯಾ ಕುದುರೆಯನ್ನೇರಿ ಮಾಡಬಾರದ್ದನ್ನು ಮಾಡಿ ದೇವರು ನೀಡಿದ ಸುಂದರ, ಸುಖಮಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ವಿಷಾದದ ಸಂಗತಿಯಾಗಿದೆ. ಮಾಯಾಪರದೆ ಸರಿಸಿ ಹೊರಬಂದು ಮಾನವೀಯ ಸತ್ವವನ್ನು ಮೈಗೂಡಿಸಿಕೊಂಡು ನಡೆಯಬೇಕು ಎಂದರು.
ಇದೇ ವೇಳೆ ಸೇವಾಧಾರಿಗಳನ್ನು ಮತ್ತು ವಿವಿಧ ರಂಗದಲ್ಲಿನ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹೋತನಹಳ್ಳಿ ಸಿಂದಗಿಮಠದ ಶಂಭುಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.
ಪುರಸಭೆ ಸದಸ್ಯ ಸುರೇಶ ಕುರಗೋಡಿ, ಮುಖಂಡರಾದ ಆನಂದ ಹಾದಿಮನಿ, ಹುಚ್ಚಯ್ಯಸ್ವಾಮಿ ಹುಚ್ಚೇಶ್ವರಮಠ, ಸಾಹಿತಿ ಎ.ಕೆ.ಆದವಾನಿಮಠ, ಶಂಕರಯ್ಯಸ್ವಾಮಿ ಹುಚ್ಚೇಶ್ವರಮಠ, ಮಲ್ಲಯ್ಯಸ್ವಾಮಿ ಹುಚ್ಚೇಶ್ವರಮಠ, ಚನಬಸಯ್ಯ ಹುಚ್ಚಯ್ಯನಮಠ, ಸಿದ್ದಪ್ಪ ಹರವಿ, ಪ್ರಕಾಶ ಪುಜಾರ, ಜಗದೀಶ ಯಲಿಗಾರ, ಕಲ್ಲಪ್ಪ ಹರವಿ, ಬಾಪುಗೌಡ್ರ ಪಾಟೀಲ, ನಿಂಗನಗೌಡ್ರ ಪಾಟೀಲ, ಗಿರಿರಾಜ್ ದೇಸಾಯಿ, ರಮೇಶ ಶೆಟ್ಟರ, ನನ್ನೆಸಾಬ ದೇವಗಿರಿ, ಸುರೆಶ ಮುರಿಗೇಣ್ಣವರ, ಮಂಜು ಬ್ಯಾಹಟ್ಟಿ, ಎಂ.ಬಿ.ಉಂಕಿ ಸೇರಿದಂತೆ ದೇವಸ್ಥಾನದ ಸೇವಾ ಸಮಿತಿ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.