ಹಾವೇರಿ:ಮುಂಗಾರು ಹಂಗಾಮಿನ ಬೆಳೆ ಹಾಗೂ ಕೃಷಿ ತಾಂತ್ರಿಕತೆ ಕುರಿತು ಜಿಲ್ಲೆಯ ರೈತರಿಗೆ ಮಾಹಿತಿ ನೀಡಲು ಕೃಷಿ ಇಲಾಖೆ ಆಯೋಜಿಸಿರುವ ‘ಮುಂಗಾರು ಸಮಗ್ರ ಕೃಷಿ ಅಭಿಯಾನ ಜಾಗೃತಿ’ಯ ಪ್ರಚಾರ ವಾಹನಗಳಿಗೆ ಶುಕ್ರವಾರ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಚಾಲನೆ ನೀಡಿದರು.
ಜಾಗೃತಿ ಜಾಥಾವು ಮೂರು ದಿನಗಳ ಕಾಲ ‘ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಎಂಬ ಶೀರ್ಷಿಕೆಯಡಿ ಜಿಲ್ಲೆಯ ಗ್ರಾಮಗಳಿಗೆ ಭೇಟಿ ನೀಡಿ, ಮುಂಗಾರು ಬಿತ್ತನೆ, ಬೀಜದ ಸಮಗ್ರ ನಿರ್ವಹಣೆ, ಬೆಳೆಗಳ ಸಮಗ್ರ ಕೀಟದ ನಿರ್ವಹಣೆ, ನೀರು, ಬೆಳೆ ನಿರ್ವಹಣೆ ಹಾಗೂ ವಿವಿಧ ಕೃಷಿ ಯೋಜನೆಗಳ ಕುರಿತು ವಿಡಿಯೊ ಪ್ರದರ್ಶನ ಹಾಗೂ ವಿವಿಧ ಕೃಷಿ ಯೋಜನೆಗಳ ಕರಪತ್ರಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮವಾಗಿದೆ.
ಮೊದಲೆರಡು ದಿನ ಪ್ರಚಾರ, ಕೊನೆಯ ದಿನ ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ. ರೈತರಿಗೆ ವಿಶೇಷ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಪ್ರತಿ ತಾಲ್ಲೂಕಿಗೊಂದು ವಾಹನ ಸಿದ್ಧಪಡಿಸಲಾಗಿದೆ. ಇಲಾಖೆಯ ಯೋಜನೆಗಳಾದ ಕೃಷಿ ಭಾಗ್ಯ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ, ಕೃಷಿ ಅಭಿಯಾನ , ಕೃಷಿ ಯಂತ್ರಧಾರೆ, ಪ್ರಮಾಣಿತ ಗುಣಮಟ್ಟದ ಬಿತ್ತನೆ ಬೀಜ, ಕೃಷಿ ಯಾಂತ್ರೀಕರಣ, ರಾಷ್ಟ್ರೀಯ ಕೃಷಿ ವಿಕಾಸ, ರಾಷ್ಟ್ರೀಯ ಆಹಾರ ಭದ್ರತೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ, ಪರಂಪರಾಗತ ಕೃಷಿ ವಿಕಾಸ, ಮಣ್ಣು ಆರೋಗ್ಯ ಅಭಿಯಾನ, ಸಾವಯವ ಭಾಗ್ಯ, ಆತ್ಮಾ, ಕೃಷಿ ಉತ್ಪನ್ನಗಳ ಸಂಸ್ಕರಣೆ ಬಗ್ಗೆ ಮಾಹಿತಿ ನೀಡಲಿದೆ ಎಂದುಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ವಿವರಿಸಿದರು.
ವಿವಿಧ ಯೋಜನೆಗಳ ಕರಪತ್ರಗಳನ್ನು ಜಿಲ್ಲಾಧಿಕಾರಿ ಬಿಡುಗೊಳಿಸಿದರು.ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲೀಲಾವತಿ, ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.