ಹಾವೇರಿ:ನಗರದ ಹೊಸಮಠದಲ್ಲಿ ಶೂನ್ಯಪೀಠದ ಪ್ರಥಮ ಅಧ್ಯಕ್ಷ ಅಲ್ಲಮಪ್ರಭು ದೇವರ ಜಯಂತಿಯನ್ನು ಮಂಗಳವಾರ ಸರಳವಾಗಿ ಆಚರಿಸಲಾಯಿತು.
ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘ವಚನ ಸಾಹಿತ್ಯದ ಮೇರು ಚಳವಳಿಯಲ್ಲಿ ಅಗ್ರ ನಾಯಕ ಅಲ್ಲಮ. ಅಲ್ಲಮರು ಕಲ್ಯಾಣದ ಬಹುದೊಡ್ಡ ಅನುಭಾವಿ ವಚನಕಾರರು. ಕಾಲಜ್ಞಾನ ವಚನಗಳಿಂದ ಅನುಭವಿಗಳನ್ನು, ಸಾಧಕರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ಧೀಮಂತ ವ್ಯಕ್ತಿತ್ವ ಅಲ್ಲಮರದ್ದು. ಅವರ ಶೂನ್ಯ ಸಿದ್ಧಾಂತವನ್ನು ಪ್ರತಿಪಾದಿಸಿದರು ಎಂದು ಹೇಳಿದರು.
‘ಹೊರಗಿನ ವ್ಯವಸಾಯ ಔಪಚಾರಿಕವಾಗಿ ನಡೆದು, ಅಂತರಂಗದ ವ್ಯವಸಾಯ ನಿರಂತರವಾಗಿ ನಡೆಯಬೇಕು. ಈ ಶರೀರವೆಂಬ ತೋಟದಲ್ಲಿ ಮನವೆಂಬ ಗುದ್ದಲಿಯಿಂದ ಅಜ್ಞಾನದಿಂದಾವೃತವಾದ ಭ್ರಾಂತಿಯ ಬೇರನ್ನು ಅಗೆದು ತೆಗೆಯಬೇಕು. ಸಂಸಾರದ ಹೆಂಟೆಯನ್ನು ಹೃದಯದ ಹೊಲವನ್ನು ಹದಗೊಳಿಸಬೇಕು. ಲೌಕಿಕದ ಜೊತೆಗೆ ಆಧ್ಯಾತ್ಮಿಕ ಬೆಳಕನ್ನುಕಾಣಬೇಕು ಎಂದು ಅಲ್ಲಮರ ಸಂದೇಶದ ಬಗ್ಗೆ ಸ್ವಾಮೀಜಿ ಬೆಳಕು ಚೆಲ್ಲಿದರು.
ಹಾವೇರಿ ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ, ನಗರಾಭಿವೃಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾಗೇಂದ್ರ ಕಟಕೋಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.