ಹಾನಗಲ್: ಇಲ್ಲಿನ ತಾಲ್ಲೂಕು ಪಂಚಾಯಿತಿ ಆವರಣದಲ್ಲಿನ ಅಂಬೇಡ್ಕರ್ ಪುತ್ಥಳಿಗೆ ಸೋಮವಾರ ಶಾಸಕ ಶ್ರೀನಿವಾಸ ಮಾನೆ ಮಾಲಾರ್ಪಣೆ ಮಾಡುವ ಮೂಲಕ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ರಾಂ ಅವರ ಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು.
ಮುಖ್ಯ ರಸ್ತೆಯ ಮೂಲಕ ಅಂಬೇಡ್ಕರ್ ಭವನ ತಲುಪಿದ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಮತ್ತು ವಾದ್ಯ ವೈಭವ ಮೆರುಗು ನೀಡಿದವು. ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು ಮತ್ತು ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.
ಅಂಬೇಡ್ಕರ್ ಭವನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಶ್ರೀನಿವಾಸ ಮಾನೆ, ‘ದೇಶದ ಭವಿಷ್ಯ ಗಮನದಲ್ಲಿಟ್ಟುಕೊಂಡು ಬಾಬಾಸಾಹೇಬ ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ. ದೇಶ ಮತ್ತೆ ಗುಲಾಮಗಿರಿಯತ್ತ ಮರುಕಳಿಸದಂತೆ ಯುವ ಸಮೂಹ ಎಚ್ಚರ ವಹಿಸಬೇಕು’ ಎಂದರು.
ಹಾನಗಲ್ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಹೊನ್ನಪ್ಪ ಭೋವಿ ಮತ್ತು ಸರ್ಕಾರ ಪಿಯು ಕಾಲೇಜಿನ ಉಪನ್ಯಾಸಕ ಎಚ್.ಎಸ್.ಬಾರ್ಕಿ ಉಪನ್ಯಾಸ ನೀಡಿದರು. ಬಾಲಚಂದ್ರ ಅಂಬಿಗೇರ ಮತ್ತು ಸಂಗಡಿಗರು ಅಂಬೇಡ್ಕರ ಕುರಿತು ಭೀಮ ಗೀತೆ ಹಾಡಿದರು.
ತಹಶೀಲ್ದಾರ್ ರೇಣುಕಾ ಎಸ್, ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಉಪಾಧ್ಯಕ್ಷೆ ವೀಣಾ ಗುಡಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಪ್ರಮುಖರಾದ ಕೊಟ್ರಪ್ಪ ಕುದರಿಸಿದ್ದನವರ, ಹನುಮಂತಪ್ಪ ಯಳ್ಳೂರ, ಪುಟ್ಟಪ್ಪ ನರೇಗಲ್, ಉಮೇಶ ಮಾಳಗಿ, ನಿಂಗಪ್ಪ ಕಾಳೇರ, ರಾಜಕುಮಾರ ಶಿರಪಂತಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.