ಶಿಗ್ಗಾವಿ: ತಾಲ್ಲೂಕಿನ ಕನಕ ದಾಸರ ಜನ್ಮಭೂಮಿ ಬಾಡ ಗ್ರಾಮದಲ್ಲಿ ಜೂನ್ 18 ಮತ್ತು 10ರಂದು ಅನ್ನದಾನೇಶ್ವರ ಸ್ವಾಮಿಮಂದಿರ ಜೀರ್ಣೋದ್ಧಾರ ಹಾಗೂ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಉಜ್ಜಯಿನಿ, ಶ್ರೀಶೈಲ ಹಾಗೂ ಕಾಶೀ ಪೀಠದ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಸಾಮೂಹಿಕ ಅಯ್ಯಾಚಾರ, ಶಿವದೀಕ್ಷಾ ಹಾಗೂ ಧರ್ಮ ಸಮಾರಂಭ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಜೂ.18 ರಂದು ಮಧ್ಯಾಹ್ನ 2ಗಂಟೆಗ ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಾಶೀ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಿರಿಯ ಶ್ರೀ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಲಿದೆ. ನಂತರ ಧರ್ಮ ಸಮಾರಂಭ ನಡೆಯಲಿದೆ.
ಜೂ.19ರಂದು ಬೆಳಿಗ್ಗೆ ಬ್ರಾಹ್ಮಿ ಮಹೂರ್ತದಲ್ಲಿ ಅನ್ನದಾನೇಶ್ವರ ಸ್ವಾಮಿ ಗದ್ಗುಗೆಯ ಪ್ರಾಣ ಪ್ರತಿಷ್ಠಾಪನೆ. ನಂತರ ಜಂಗಮ ಮಹೇಶ್ವರ ಸಾಮೂಹಿಕ ಅಯ್ಯಾಚಾರ, ಶಿವದೀಕ್ಷಾ ಕಾರ್ಯಕ್ರಮ ನಡೆಯಲಿದೆ. 11 ಗಂಟೆಗೆ ಧರ್ಮ ಸಮಾರಂಭ. ಮಹಾ ಪ್ರಸಾದ ಜರುಗಲಿದೆ.
ಬಂಕಾಪುರ ಅರಳೆಮಠದ ರೇವಣಸಿದ್ದೇಶ್ವರ ಸ್ವಾಮೀಜಿ ನೇತೃತ್ವ ವಹಿಸುವರು. ಹಿರೇಮಣಕಟ್ಟಿ ವಿಶ್ವಾರಾಧ್ಯ ಸ್ವಾಮೀಜಿ, ಹೋತನಹಳ್ಳಿ ಶಂಭುಲಿಂಗ ಸ್ವಾಮೀಜಿ, ಅಕ್ಕಿಆಲೂರ ಚಂದ್ರಶೇಖರ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಸ್ವಾಮೀಜಿ, ಹಿರೇಬೆಂಡಿಗೇರಿ ವಿಶ್ವೇಶ್ವರ ಸ್ವಾಮೀಜಿ ಸಮ್ಮುಖ ವಹಿಸುವರು. ಸಂಗೀತಗಾರರು, ಕಲಾವಿದರು, ಉಪನ್ಯಾಸಕರು, ರಾಜಕೀಯ ಮುಖಂಡರು ಸೇರಿದಂತೆ ವಿವಿಧ ಗಣ್ಯರು ಆಗಮಿಸುವರು.
ಕಾರ್ಯಕ್ರಮ ಸಿದ್ದತೆಗಾಗಿ ಸ್ವಾಗತ ಸಮಿತಿ, ಶಿಸ್ತು ಮತ್ತು ವೇದಿಕೆ ಸಮಿತಿ, ಊಟ ಮತ್ತು ಉಪಹಾರ ಸಮಿತಿ, ರಂಗೂಲಿ ತಳಿರು ತೋರಣ ಸಮಿತಿ ಸೇರಿದಂತೆ ಸ್ವಯಂ ಸೇವಕರನ್ನು, ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.