ADVERTISEMENT

ಬ್ಯಾಡಗಿ: ಶಕ್ತಿದೇವತೆ ಕೆಂಗೊಂಡ ದುರ್ಗಾದೇವಿ ಜಾತ್ರೆ ನಾಳೆ

ಪ್ರಮೀಳಾ ಹುನಗುಂದ
Published 20 ಜನವರಿ 2025, 4:43 IST
Last Updated 20 ಜನವರಿ 2025, 4:43 IST
ಬ್ಯಾಡಗಿ ತಾಲ್ಲೂಕಿನ ಶಕ್ತಿದೇವತೆ ಕೆಂಗೊಂಡ ಗ್ರಾಮದ ದುರ್ಗಾದೇವಿ ದೇವಸ್ಥಾನದ ಒಂದು ನೋಟ
ಬ್ಯಾಡಗಿ ತಾಲ್ಲೂಕಿನ ಶಕ್ತಿದೇವತೆ ಕೆಂಗೊಂಡ ಗ್ರಾಮದ ದುರ್ಗಾದೇವಿ ದೇವಸ್ಥಾನದ ಒಂದು ನೋಟ   

ಬ್ಯಾಡಗಿ: ಭಕ್ತರ ಸಂಕಲ್ಪವನ್ನು ಈಡೇರಿಸುವ ತಾಲ್ಲೂಕಿನ ಕೆಂಗೊಂಡ ಗ್ರಾಮದ ಶಕ್ತಿದೇವತೆ ದುರ್ಗಾದೇವಿಯ ಜಾತ್ರಾ ಮಹೋತ್ಸವ ಜ. 21 ರಂದು ಜರುಗಲಿದೆ.

ಜಾತ್ರೆ ಅಹೋ ರಾತ್ರಿ ನಡೆಯುವುದೇ ಇದರ ವಿಶೇಷತೆ. ಬಂಜಾರ (ಲಂಬಾಣಿ) ಸಮಾಜದ ಆರಾಧ್ಯ ದೇವತೆಯಾಗಿರುವ ದುರ್ಗಾಮಾತೆಗೆ ನಾಡಿನಾದ್ಯಂತ ಅಪಾರ ಭಕ್ತರ ಸಮೂಹವಿದೆ. ರಾಜ್ಯದ ವಿವಿಧ ಭಾಗಗಳಿಂದ ದೇವಿಗೆ ಹರಕೆ ತೀರಿಸಲು ಭಕ್ತರು ಆಗಮಿಸುತ್ತಾರೆ. ದೇವಿಗೆ ಹಣ್ಣು, ಕಾಯಿ ನೈವೇದ್ಯ ಅರ್ಪಿಸಲಾಗುತ್ತದೆ. ಜೊತೆಗೆ ಕೋಳಿಗಳನ್ನು ಸಹ ದೇವಿಗೆ ಅರ್ಪಿಸುವ ಪದ್ಧತಿ ನಡೆದುಕೊಂಡು ಬಂದಿದೆ. ದೇವಸ್ಥಾನದ ಆವರಣದಲ್ಲಿ ಕೆಮ್ಮಮ್ಮ ದೇವಿ ದೇವಸ್ಥಾನವಿದೆ.

ದೇವಿಗೆ ಬೇಡಿಕೊಂಡರೆ ಕೆಮ್ಮು ಸಹ ನಿವಾರಣೆಯಾಗುತ್ತದೆ ಎಂದು ಭಕ್ತರು ನಂಬಿದ್ದಾರೆ. ಹೀಗಾಗಿ ಕೆಮ್ಮಮ್ಮದೇವಿಗೆ ಉಪ್ಪು, ಮೆಣಸಿನಕಾಯಿ, ಹುಣಿಸೆಹಣ್ಣಿನ ಹರಕೆ ತೀರಿಸಲಾಗುತ್ತದೆ.

ADVERTISEMENT

ಸಂತಾನ ಭಾಗ್ಯ ಪಡೆದ ದಂಪತಿ ದೇವಿಗೆ ಮಗುವಿನ ತೂಕದಷ್ಟು ಬೆಲ್ಲ ಹಾಗೂ ತೆಂಗಿನ ಕಾಯಿಗಳನ್ನು ಸಮರ್ಪಿಸುತ್ತಾರೆ. ಹೀಗಾಗಿ ದೇವಸ್ಥಾನದಲ್ಲಿ ಒಂದು ಕಾಯಂ ತಕ್ಕಡಿಯನ್ನು ನೇತು ಹಾಕಲಾಗಿದೆ. ಈಗ ದೇವಸ್ಥಾನವನ್ನು ಸಾಕಷ್ಟು ಅಭಿವೃದ್ಧಿಪಡಿಸಲಾಗಿದ್ದು, ಪ್ರತಿ ಅಮಾವಸ್ಯೆಗೆ ದೇವಿಯ ದರ್ಶನಕ್ಕೆ ಬರುವ ನೂರಾರು ಭಕ್ತರಿಗೆ ಅನ್ನದಾಸೋಹ ನಡೆಯುತ್ತಿದೆ. ಮಹಾದ್ವಾರ ನಿರ್ಮಾಣ ಹಾಗೂ ಭಕ್ತರಿಗೆ ವಸತಿ ಕೊಠಡಿಗಳ ಜೋರ್ಣೋದ್ಧಾರ ಕಾರ್ಯ ಪೂರ್ಣಗೊಂಡಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಚಂದ್ರಪ್ಪ ಗುಡುಗೂರ ಮಾಹಿತಿ ನೀಡಿದರು.

ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ 48ರಿಂದ 8 ಕಿ.ಮೀ ಹಾಗೂ ಸೊರಬ–ಗಜೇಂದ್ರಗಡ ರಾಜ್ಯ ಹೆದ್ದಾರಿಯಿಂದ 2ಕಿ.ಮೀ ದೂರದ ಕೆಂಗೊಂಡ ಗ್ರಾಮದಲ್ಲಿ ದೇವತೆ ನೆಲೆಸಿದ್ದು, ದರ್ಶನಕ್ಕಾಗಿ ಬರುವ ಭಕ್ತರಿಗೆ ಸಾರಿಗೆ ಸಂಸ್ಥೆ ಬಸ್‌ ವ್ಯವಸ್ಥೆ ಕಲ್ಪಿಸಲಿದೆ. ಬ್ಯಾಡಗಿ, ಹಾವೇರಿ ಹಾಗೂ ರಾಣೆಬೆನ್ನೂರು ಕಡೆಗಳಿಂದ ಬರುವ ಭಕ್ತರಿಗೆ ಬಸ್‌ ವ್ಯವಸ್ಥೆ ಇದೆ. ಸ್ವಂತ ವಾಹನಗಳ ಮೂಲಕ ಆಗಮಿಸುವವರಿಗೆ ಪಾರ್ಕಿಂಗ್‌ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ದ್ಯಾಮನಗೌಡ ಪಾಟೀಲ ಹೇಳಿದರು.

ಇತಿಹಾಸ: ಚಾಲಕ್ಯ ಶೈಲಿಯಲ್ಲಿ ನಿರ್ಮಿತವಾಗಿರುವ ಕಲ್ಮೇಶ್ವರ ದೇವಾಲಯ ಮುಖ್ಯ ಆಕರ್ಷಣೆಯಾಗಿದೆ. ಕೆಂಗೊಂಡ ಗ್ರಾಮದಲ್ಲಿ ಬಸವಣ್ಣ, ಹನುಮಂತ, ದ್ಯಾಮವ್ವ, ಚೌಡವ್ವ ಉಡಚವ್ವ, ಮಾಯವ್ವ, ಕೆಮ್ಮವ್ವ ಎಂಬ ದೇವಸ್ಥಾನಗಳಿವೆ.

ಬ್ಯಾಡಗಿ ತಾಲ್ಲೂಕಿನ ಕೆಂಗೊಂಡ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ಮದ್ಯಪಾನವನ್ನು ಶಾಶ್ವತವಾಗಿ ನಿಷೇಧಿಸಲಾಗಿದೆ
ರಾಜಶೇಖರ ಬಣಕಾರ ಉಪಾಧ್ಯಕ್ಷ ಕೆಂಗೊಂಡ ದುರ್ಗಾದೇವಿ ದೇವಸ್ಥಾನ ಸೇವಾ ಸಮಿತಿ

ವಿವಿಧ ಕಾರ್ಯಕ್ರಮ

ಜ.17ರಂದು ಗ್ರಾಮದ ಭಕ್ತರಿಂದ ಉಡಿ ತುಂಬುವ ಕಾರ್ಯಕ್ರಮದ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ. ಜ. 21ರಂದು ಪರಸಿ ಕೂಡುವುದು ಹಾಗೂ ಹಣ್ಣು ಕಾಯಿ ನೈವೇದ್ಯ ಅರ್ಪಿಸುವುದು. ಜ.23ರಂದು ಓಕಳಿ ಚೌತಮನಿ ಪ್ರವೇಶ ಜ. 25ರಂದು ಭಕ್ತರ ಹರಕೆ ಸಾಮಾನುಗಳ ಹರಾಜು ಪ್ರಕ್ರಿಯೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.