ಹಾವೇರಿ:‘ಮಹಿಳೆಯರ ಮಾರಾಟ’ ಕುರಿತು ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಬಗ್ಗೆ ಶಾಸಕ ನೆಹರು ಓಲೇಕಾರ ಮಾಡಿರುವ ಆರೋಪವನ್ನು ನಾವು ಖಂಡಿಸುತ್ತೇವೆ. ನಮ್ಮ ಸಮುದಾಯದ ಸಜ್ಜನ ರಾಜಕಾರಣಿಯ ಚಾರಿತ್ರ್ಯ ಹರಣ ಮಾಡುತ್ತಿರುವುದು ಸರಿಯಲ್ಲ ಎಂದು ಕರ್ನಾಟಕ ಬಂಜಾರ ಸಂತ ಸೇವಾಲಾಲ್ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಯರಾಮ ಮಾಳಾಪುರ್ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರುದ್ರಪ್ಪ ಲಮಾಣಿ ಅವರನ್ನು ಓಲೇಕಾರ್ ಅವರು ರಾಜಕೀಯವಾಗಿ ಎದುರಿಸಲಾಗದೆ, ವ್ಯಕ್ತಿಗತವಾಗಿ ಅಪಮಾನ ಹೊರಟಿರುವುದು ಸರಿಯಲ್ಲ. ಬಿಜೆಪಿ ಹೈಕಮಾಂಡ್ ಕೂಡಲೇ ಕ್ರಮ ಕೈಗೊಳ್ಳಬೇಕು. ಓಲೇಕಾರ್ ಅವರು ನಮ್ಮ ಸಮುದಾಯದ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಡ್ರಗ್ಸ್ ಪ್ರಕರಣದಲ್ಲಿ ರುದ್ರಪ್ಪ ಲಮಾಣಿ ಅವರ ಪುತ್ರ ದರ್ಶನ್ ಆರ್.ಲಮಾಣಿ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅವರ ವಿರುದ್ಧ ಎಫ್ಐಆರ್ ದಾಖಲಾಗಿಲ್ಲ. ವಿಚಾರಣೆಯಲ್ಲಿ ತಮಗೆ ಗೊತ್ತಿರುವ ಮಾಹಿತಿ ಕೊಟ್ಟು ಬರಲಿದ್ದಾರೆ. ಪ್ರಕರಣ ಇನ್ನೂ ತನಿಖಾ ಹಂತದಲ್ಲಿ ಇರುವಾಗ ದರ್ಶನ್ ಅವರ ಬಗ್ಗೆ ಆರೋಪ ಮಾಡುವುದು ಸರಿಯಲ್ಲ ಎಂದು ಸಮರ್ಥಿಸಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ನಾಗಪ್ಪ ಲಮಾಣಿ, ಸಂತೋಷ ಲಮಾಣಿ, ಶಂಕ್ರಪ್ಪಲಮಾಣಿ, ಪೀರಸಾಮಿ ಲಮಾಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.