
ಬ್ಯಾಡಗಿ: ಅಂತರರಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಬ್ಯಾಡಗಿಯಲ್ಲಿ ಎಕ್ಸ್ಪ್ರೆಸ್ ರೈಲುಗಳನ್ನು ನಿಲುಗಡೆ ಮಾಡಬೇಕೆಂದು ಆಗ್ರಹಿಸಿ ರೈಲ್ವೆ ಕ್ಷೇಮಾಭಿವೃದ್ಧಿ ಹಾಗೂ ಸುಧಾರಣಾ ಸಮಿತಿಯಿಂದ ನೈರುತ್ವ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಅವರಿಗೆ ಹುಬ್ಬಳ್ಳಿಯಲ್ಲಿ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಮಾಲತೇಶ ಅರಳಿಮಟ್ಟಿ, ‘ಇಲ್ಲಿಯ ಮೆಣಸಿನಕಾಯಿ ವರ್ತಕರು ಹಾಗೂ ಮೆಣಸಿನಕಾಯಿ ಮಾರಾಟಕ್ಕೆ ಬರುವ ರೈತರು ದೂರದ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ದಾದರ್, ಯಶವಂತಪುರ–ವಾಸ್ಕೋ ಡ ಗಾಮ, ರಾಣಿ ಚನ್ನಮ್ಮ, ಜನ ಶತಾಬ್ದಿ ಹಾಗೂ ಬೆಂಗಳೂರ–ಹುಬ್ಬಳ್ಳಿ ಎಕ್ಸ್ಪ್ರೆಸ್ಗಳು ಇಲ್ಲಿನ ರೈಲುನಿಲ್ದಾಣದಲ್ಲಿ ನಿಲುಗಡೆ ಆಗುವುದಿಲ್ಲ. ವ್ಯಾಪಾರಸ್ಥರು ಹಾಗೂ ರೈತರ ಅನುಕೂಲಕ್ಕಾಗಿ ಈ ರೈಲುಗಳ ನಿಲುಗಡೆಗೆ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.
ಸಮಿತಿಯ ನಿರ್ದೇಶಕ ಬಸವರಾಜ ಹಂಜಿ ಮಾತನಾಡಿ, ‘ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗಾಗಿ ನಮ್ಮ ಸಮಿತಿ ಅನೇಕ ವರ್ಷಗಳಿಂದ ಪ್ರಯತ್ನ ನಡೆಸಿದೆ. ಆದರೂ, ಕ್ರಮ ವಹಿಸಿಲ್ಲ’ ಎಂದರು.
ವಾಣಿಜೋದ್ಯಮ ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪಗೌಡ್ರ ಮಾತನಾಡಿ, ‘ಬ್ಯಾಡಗಿಯು ಮೆಣಸಿನಕಾಯಿ ವ್ಯಾಪಾರದ ಪ್ರಮುಖ ಕೇಂದ್ರವಾಗಿದೆ. ವಾರ್ಷಿಕ ₹2,000 ಕೋಟಿ ವಹಿವಾಟು ನಡೆಯುತ್ತದೆ. ಹಾಗಾಗಿ, ಇಲ್ಲಿ ಎಲ್ಲಾ ಎಕ್ಸ್ಪ್ರೆಸ್ ರೈಲುಗಳ ನಿಲುಗಡೆ ಅಗತ್ಯವಿದೆ’ ಎಂದು ತಿಳಿಸಿದರು.
ಮಹದೇವಪ್ಪ ಕೆಂಚನಗೌಡ್ರ, ಪ್ರಕಾಶ ಶೃಂಗೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.