ADVERTISEMENT

ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡಿ: ನಗರಠಾಣೆ ಸಿಪಿಐ ಎಂ.ಐ. ಗೌಡಪ್ಪಗೌಡ

ಸಹಾಯವಾಣಿ, ಮಾಸ್ಕ್ ಕುರಿತು ಜಾಗೃತಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 6:34 IST
Last Updated 9 ಅಕ್ಟೋಬರ್ 2020, 6:34 IST
ರಾಣೆಬೆನ್ನೂರಿನಲ್ಲಿ 112 ಸಹಾಯವಾಣಿ ಬಗ್ಗೆ ಪೊಲೀಸರು ಸಾರ್ವಜನಿಕರಿಗೆ ಮಾಹಿತಿ ನೀಡಿದರು
ರಾಣೆಬೆನ್ನೂರಿನಲ್ಲಿ 112 ಸಹಾಯವಾಣಿ ಬಗ್ಗೆ ಪೊಲೀಸರು ಸಾರ್ವಜನಿಕರಿಗೆ ಮಾಹಿತಿ ನೀಡಿದರು   

ರಾಣೆಬೆನ್ನೂರು: ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲು ಒಂದೇ ಭಾರತ, ಒಂದೇ ತುರ್ತು ಕರೆ ಸಂಖ್ಯೆ 112 ಸಹಾಯವಾಣಿ ಪ್ರಾರಂಭವಾಗಿದೆ. ಇನ್ನು ಮುಂದೆ ಸಾರ್ವಜನಿಕರು ತುರ್ತು ಕರೆ ಮಾಡಿ ವೈದ್ಯಕೀಯ, ಪೊಲೀಸ್‌, ಆಂಬುಲೆನ್ಸ್‌, ಅಗ್ನಿಶಾಮಕ ನೆರವು ಪಡೆಯಲು ಮೇಲಿನ ಸಂಖ್ಯೆಗೆ ಕರೆ ಮಾಡಬೇಕು ಎಂದು ನಗರಠಾಣೆ ಸಿಪಿಐ ಎಂ.ಐ. ಗೌಡಪ್ಪಗೌಡ ಹೇಳಿದರು.

112 ತುರ್ತು ಸ್ಪಂದನ ಸಹಾಯ ವ್ಯವಸ್ಥೆ ಬಗ್ಗೆ ಮಾಹಿತಿ ನೀಡುವ ಮತ್ತು ಮಾಸ್ಕ್‌ ಧರಿಸುವ ಬಗ್ಗೆ ಗುರುವಾರ ಬಸ್‌ ನಿಲ್ದಾಣ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆರಂಭಿಕ ಹಂತದಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಿ, ಅಪರಾಧಗಳನ್ನು ತಡೆಗಟ್ಟುವ ಉದ್ದೇಶ ಹೊಂದಲಾಗಿದೆ. ಒಂದು ವಾಹನದಲ್ಲಿ ಮೂವರು ಪೊಲೀಸ್‌ ಸಿಬ್ಬಂದಿ ಇರುತ್ತಾರೆ ಎಲ್ಲ ಕರೆಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಬಗೆಹರಿಸುವರು ಎಂದರು. ವಾರ್ಡ್‌ ಬೀಟ್‌ಗಳಲ್ಲಿ 112 ತುರ್ತು ಸೇವೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಿಬ್ಬಂದಿ ನೀಡಬೇಕು ಎಂದು ತಾಕೀತು ಮಾಡಿದರು.

ADVERTISEMENT

ಅಪರಾಧ ಸಂಖ್ಯೆಗಳನ್ನು ಕಡಿಮೆ ಮಾಡಲು, ಆಸ್ತಿ ಪಾಸ್ತಿ, ತಮ್ಮ ರಕ್ಷಣೆ, ಆರೋಗ್ಯ, ಪ್ರಾಣ ಹಾನಿ, ಅಪಘಾತ ಸೇರಿದಂತೆ ಯಾವುದೇ ಸಮಸ್ಯೆಗೆ ತಕ್ಷಣ ಪೊಲೀಸ್‌ ಸಹಾಯ ಬೇಕಿದ್ದಲ್ಲಿ 112 ಸಂಖ್ಯೆಗೆ ಕರೆ ಮಾಡಬಹುದು. ಮೊಬೈಲ್‌ ಆ್ಯಪ್‌, ವಾಟ್ಸ್‌ಆ್ಯಪ್, ಇ- ಮೇಲ್‌ ಮೂಲಕ ಸಂದೇಶ ರವಾನಿಸಬಹುದು ಎಂದರು.

ಮಾಸ್ಕ್‌ ಧರಿಸದೇ ಬೈಕ್‌ ಚಾಲನೆ ಮಾಡುವವರಿಗೆ ಪೊಲೀಸರು ದಂಡ ವಿಧಿಸಿದರು. ಪಿಎಸ್‌ಐ ಪ್ರಭು ಕೆಳಗಿಮನಿ, ಟ್ರಾಫಿಕ್‌ ಪಿಎಸ್‌ಐ ಪ್ರಕಾಶ ಶಿಡ್ಲಣ್ಣನವರ, ಪಿಎಸ್‌ಐ ಉದಗಟ್ಟಿ ಹಾಗೂ ಪೊಲೀಸರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.