ADVERTISEMENT

ಹಾವೇರಿ |ಮಕ್ಕಳ ನಾಟಕೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 16:17 IST
Last Updated 24 ಡಿಸೆಂಬರ್ 2019, 16:17 IST
ಹಾವೇರಿ ನಗರದಲ್ಲಿ ಮಂಗಳವಾರ ನಡೆದ ಮಕ್ಕಳ ನಾಟಕೋತ್ಸವದ ದೃಶ್ಯ
ಹಾವೇರಿ ನಗರದಲ್ಲಿ ಮಂಗಳವಾರ ನಡೆದ ಮಕ್ಕಳ ನಾಟಕೋತ್ಸವದ ದೃಶ್ಯ   

ಹಾವೇರಿ: ‘ಜನಪದ ಕಲೆಯಾದ ಬೀದಿನಾಟಕಗಳಿಂದ ನಮ್ಮ ಸಮಾಜಕ್ಕೆ ಒಳ್ಳೆಯ ಸಂದೇಶಗಳು ತಲುಪುತ್ತಿವೆ’ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ಮೈಲಾರ ಮಹದೇವಪ್ಪ ವೃತ್ತದಲ್ಲಿ ಮಂಗಳವಾರ ಬೆಂಗಳೂರಿನ ಬಾಲಭವನ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಬಾಲ ಭವನ ಸಹಯೋಗದಲ್ಲಿ ನಡೆದ ಅಭಿರಂಗ ಮಕ್ಕಳ ನಾಟಕೋತ್ಸವ ಕಾರ್ಯಕ್ರಮಕ್ಕೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

‘ಸಾಮಾಜಿಕ ಸಮಸ್ಯೆಗಳನ್ನು ತೆರೆದಿಟ್ಟು ಸಮಾಜದ ಪರಿವರ್ತನೆಗೆ ಸಂದೇಶಗಳನ್ನು ನೀಡಲು ಬೀದಿ ನಾಟಕ ಪರಿಣಾಮಕಾರಿ ಮಾಧ್ಯಮವಾಗಿದೆ. ಈ ಸಾಮಾಜಿಕ ಬದಲಾವಣೆ ಕೆಲಸದಲ್ಲಿ ಮಕ್ಕಳು ಮುಂದಾಗಿರುವುದರಿಂದ ಈ ಮಕ್ಕಳಿಗೆ ಸಾಮಾಜಿಕ ಅರಿವು ಮತ್ತು ಬದಲಾವಣೆ ಮಾಡುವ ಮನೋಭಾವ ಬೆಳೆಯುತ್ತದೆ. ಇದು ಸರ್ಕಾರದ ಉದ್ದೇಶವೂ ಆಗಿದೆ. ಮಕ್ಕಳನ್ನು ಇಂತಹ ಚಟುವಟಿಕೆಗಳಲ್ಲಿ ಶಿಕ್ಷಕರು ತೊಡಗಿಸುವ ಮೂಲಕ ಜಾಗೃತ ಪ್ರಜೆಗಳನ್ನಾಗಿ ಬೆಳೆಸಬೇಕು’ ಎಂದು ಹೇಳಿದರು.

ADVERTISEMENT

ಜಲ ಸಂರಕ್ಷಣೆಯ ಸಂದೇಶ ಬಿಂಬಿಸುವ ‘ಕೆರೆ ಕಳದೈತ್ರಿ’ ನಾಟಕ ಹಾಗೂ ಬಾಲ್ಯ ವಿವಾಹ ನಿಷೇಧ ಕುರಿತಂತೆ ಜಾಗೃತಿ ಮೂಡಿಸುವ ‘ತಿಮ್ಮನ ಮದುವೆ’ ಬೀದಿ ನಾಟಕಗಳನ್ನು ಮನ್ನಂಗಿ ಹಾಗೂ ಕುನ್ನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದರು.

ಮುಖಂಡರಾದ ಗಿರೀಶ್ ತುಪ್ಪದ, ದೊಡ್ಡಪ್ಪಗೌಡ್ರ ಪಾಟೀಲ, ಉಮೇಶ ಮಾಗಳ, ರಂಗಕರ್ಮಿ ಸತೀಶ ಕುಲಕರ್ಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ.ಶೆಟ್ಟಪ್ಪನವರ, ಹಾವೇರಿಯ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸುರೇಶ ಮೂಡಲದವರ, ಸಿಆರ್‌ಪಿ ಪರಮೇಶ ಬಡಿಗೇರ, ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ನಂ.2ರ ಮುಖ್ಯಶಿಕ್ಷಕ ಶ್ರೀಕಾಂತ್ ಭಜಂತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.