ಶಿಗ್ಗಾವಿ: ತಾಲ್ಲೂಕಿನ ಕುಂದೂರ, ಜಾಲಿಕಟ್ಟಿ ಗ್ರಾಮಗಳ ಸ್ಮಶಾನಕ್ಕಾಗಿ ಮೀಸಲಿಟ್ಟಿರುವ ಜಾಗದಲ್ಲಿ ಅಕ್ರಮವಾಗಿ ನಿರ್ಮಾವಾದ ಮನೆಗಳನ್ನು ಶನಿವಾರ ತೆರವುಗೊಳಿಸಲಾಯಿತು.
‘ಸರ್ಕಾರ ಕುಂದೂರ ಗ್ರಾಮಕ್ಕೆ ಎರಡು ಎಕರೆ, ಜಾಲಿಕಟ್ಟಿ ಗ್ರಾಮಕ್ಕೆ ಒಂದು ಎಕರೆ ಜಮೀನನ್ನು ಸ್ಮಶಾನಕ್ಕಾಗಿ ಮೀಸಲಿಟ್ಟಿದೆ. ಸ್ಮಶಾನ ಜಾಗದಲ್ಲಿ ಮನೆ ಕಟ್ಟಿದವರು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಬೇಕು ಎಂದು ನೋಟಿಸ್ ನೀಡಲಾಗಿತ್ತು. ಈಗ ತೆರವು ಕಾರ್ಯಾಚರಣೆ ಮಾಡಲಾಗಿದೆ’ ಎಂದು ಬಂಕಾಪುರ ನಾಡ ಕಚೇರಿ ಉಪತಹಶೀಲ್ದಾರ್ ಎಂ.ಎಸ್.ಪಾಟೀಲ ಹೇಳಿದರು.
‘ಇಲ್ಲಿನ ಬಹುತೇಕ ಮನೆಗಳಿಗೆ ಉತಾರಗಳಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆ ಕಟ್ಟಲಾಗಿದೆ. ದಿಢೀರನೆ ಬಂದು ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಮನೆಗಳಿಲ್ಲದ ಬಡವರು ಎಲ್ಲಿ ಹೋಗಬೇಕು. 10 ವರ್ಷಗಳಿಂದ ಇಲ್ಲಿ ವಾಸ ಮಾಡಿದ್ದೇವೆ. ಅಕ್ರಮ ಮನೆಗಳನ್ನು ಸರ್ಕಾರ ತಕ್ಷಣ ಸಕ್ರಮಗೊಳಿಸಬೇಕು’ ಎಂದು ನಿವಾಸಿ ರಾಜು ಬಂಡಿವಡ್ಡರ ಅಳಲನ್ನು ತೋಡಿಕೊಂಡರು.
ಕುಂದೂರ ಗ್ರಾಮ ಪಂಚಾಯ್ತಿ ಪಿಡಿಒ ಸುಧೀರ್ ಹಡಗಲಿ, ಬಂಕಾಪುರ ನಾಡಕಚೇರಿ ಕಂದಾಯ ನಿರೀಕ್ಷಕ ಆರ್.ಆರ್.ನಾಯಕ, ಪಿಎಸ್ಐ ಸಂತೋಷ ಪಾಟೀಲ, ಗ್ರಾಮಲೆಕ್ಕಾಧಿಕಾರಿ ಮಂಜುನಾಥ ಮುಳಗುಂದ, ತಾಲ್ಲೂಕು ಪಂಚಾಯ್ತಿ ಸದಸ್ಯ ಈಶ್ವರ ಹರವಿ, ಗುಡ್ಡದಚನ್ನಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಷಣ್ಮುಖ ಕಾಳಣ್ಣವರ, ಕುಂದೂರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಿವಕ್ಕ ಮರೆಮ್ಮನವರ ಸೇರಿದಂತೆ ವಿವಿಧ ಅಧಿಕಾರಿಗಳು, ಮುಖಂಡರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.