ADVERTISEMENT

ಮನಸ್ತಾಪ ಬದಿಗಿಟ್ಟು ಒಗ್ಗಟ್ಟಾಗಲು ಸಲಹೆ: ಮಾಜಿ ಶಾಸಕ ರಾಮಕೃಷ್ಣ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 2:55 IST
Last Updated 13 ಅಕ್ಟೋಬರ್ 2025, 2:55 IST
ಮುಂಡರಗಿ ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿದರು
ಮುಂಡರಗಿ ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿದರು   

ಮುಂಡರಗಿ: ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ದಲಿತ ಸಂಘರ್ಷ ಸಮಿತಿಗೆ ಒಂದು ಶಕ್ತಿ ಇದೆ. ಹಿಂದಿನ ಎಲ್ಲ ಮನಸ್ತಾಪಗಳನ್ನು ಬದಿಗಿಟ್ಟು ಪರಿಶಿಷ್ಟ ಮುಖಂಡರೆಲ್ಲ ಲೋಕಸಭಾ ಚುನಾವಣೆಯಲ್ಲಿ ಒಂದಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲು ಮುಂದಾಗಿರುವುದು ಸಂತಸದ ಸಂಗತಿ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹರ್ಷವ್ಯಕ್ತಪಡಿಸಿದರು.

ವಿವಿಧ ದಲಿತ ಸಂಘಟನೆಗಳು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರ ನಿವಾಸದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿರಹಟ್ಟಿ ಮತ ಕ್ಷೇತ್ರದ ಪರಿಶಿಷ್ಟರಲ್ಲಿ ಎರಡು ಗುಂಪುಗಳಾಗಿದ್ದವು. ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ಪರಿಶಿಷ್ಟರ ಮತಗಳು ವಿಭಜನೆಯಾಗಿ ಬಿಜೆಪಿ ಅಭ್ಯರ್ಥಿ ಗೆಲ್ಲುವಂತಾಯಿತು. ಹಳೆಯದನ್ನೆಲ್ಲ ಮರೆತು ಈಗ ಪರಿಶಿಷ್ಟರೆಲ್ಲರೂ ಒಂದಾಗಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಬೆಂಬಲ ಸೂಚಿಸುತ್ತಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.

ADVERTISEMENT

ಡಿಎಸ್‍ಎಸ್ ಮುಖಂಡ ಎಚ್.ಡಿ.ಪೂಜಾರ ಮಾತನಾಡಿ, ಕ್ಷೇತ್ರದಲ್ಲಿ ರಾಮಕೃಷ್ಣ ದೊಡ್ಡಮನಿ ಹಾಗೂ ಸುಜಾತಾ ದೊಡ್ಡಮನಿ ಅವರ ಪರವಾದ ಎರಡು ಪ್ರತ್ಯೇಕ ಬಲಾಢ್ಯ ಗುಂಪುಗಳಿವೆ. ಕಾಂಗ್ರೆಸ್ ಜಿಲ್ಲಾ ಘಟಕದ ನಾಯಕರು ಎರಡೂ ಗುಂಪುಗಳನ್ನು ಒಗ್ಗೂಡಿಸಬೇಕು. ಆ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವಂತೆ ನೋಡಿಕೊಳ್ಳಬೇಕು ಎಂದರು.

ಡಿಎಸ್‍ಎಸ್ ಮುಖಂಡ ಮರಿಯಪ್ಪ ಸಿದ್ದಣ್ಣವರ ಮಾತನಾಡಿ, ಶಿರಹಟ್ಟಿ ಮತಕ್ಷೇತ್ರದಲ್ಲಿ ದಲಿತ ಸಮುದಾಯದವರು ಬಹುಸಂಖ್ಯೆಯಲ್ಲಿದ್ದು, ಪ್ರತಿ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಆದರೆ ಈವರೆಗೂ ಕಾಂಗ್ರೆಸ್ ನಾಯಕರು ಯಾರನ್ನೂ ಸಂಪರ್ಕಿಸದೆ ಇರುವುದು ದಲಿತರಲ್ಲಿ ನೋವು ಉಂಟು ಮಾಡಿದೆ. ಎಲ್ಲರನ್ನೂ ಕರೆದುಕೊಂಡು ಚುನಾವಣೆ ಮಾಡಬೇಕು ಎಂದು ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ.ಮೋರನಾಳ ಮಾತನಾಡಿ, ಎರಡೂ ಬಣಗಳನ್ನು ಸೇರಿಸಿ ಸಭೆ ನಡೆಸುವ ಕುರಿತಂತೆ ಜಿಲ್ಲಾ ಮುಖಂಡರೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ನಬಿಸಾಬ್ ಕೆಲೂರ, ಕೆ.ಎನ್.ದೊಡ್ಡಮನಿ ಮಾತನಾಡಿದರು. ಮುಖಂಡರಾದ ಬಸವರಾಜ ದೇಸಾಯಿ, ರಾಜಾಭಕ್ಷಿ ಬೆಟಗೇರಿ, ದಂಡೆಪ್ಪ ಹರಿಜನ, ಡಿ.ಎಂ.ಕಾತರಕಿ, ಎ.ಪಿ.ದಂಡಿನ, ಎಚ್.ಎಚ್.ಹರಿಜನ, ಮೌಲಾಸಾಬ್ ಭಾಗವಾನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.