ಹಾವೇರಿ: ವಾಹನದ ವಿಮಾ ಮೊತ್ತ ನೀಡಲು ಹುಬ್ಬಳ್ಳಿಯ ಟಾಟಾ ಎಐಜಿ ಇನ್ಸೂರೆನ್ಸ್ ಕಂಪನಿಗೆ ಹಾವೇರಿ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ಹಾವೇರಿಯ ಬಸವೇಶ್ವರ ನಗರದ ನಿವಾಸಿ ದೇವರಾಜ ರವೀಂದ್ರ ಹೊಸಮನಿ ಅವರು ತಾವು ಖರೀದಿಸಿd ದ್ವಿಚಕ್ರ ವಾಹನಕ್ಕೆ ಹುಬ್ಬಳ್ಳಿಯ ಟಾಟಾ ಎಐಜಿ ಇನ್ಸೂರೆನ್ಸ್ ಕಂಪನಿಯಲ್ಲಿ ₹35,214 ಮೊತ್ತ ಇನ್ಸೂರೆನ್ಸ್ ಮಾಡಿಸಿದ್ದರು.
ಮನೆ ಮುಂದೆ ನಿಲ್ಲಿಸಿದ ದ್ವಿಚಕ್ರ ವಾಹನವು 7 ಮಾರ್ಚ್ 2019ರಂದು ರಾತ್ರಿ ವೇಳೆ ಕಳುವಾಗಿದ್ದರಿಂದ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಇನ್ಸೂರೆನ್ಸ್ ಕಂಪನಿಯ ಟೋಲ್ ಫ್ರೀ ನಂಬರ್ಗೆ ಕರೆ ಮಾಡಿದಾಗ ಅವರು ಯಾವುದೇ ಪ್ರತ್ಯುತ್ತರ ನೀಡದೇ ಮೂರೂವರೆ ತಿಂಗಳ ನಂತರ ನಿಮ್ಮ ದೂರು ದಾಖಲಾಗಿದೆ ಎಂದು ತಿಳಿಸಿದ್ದರು.
ಪರಿಹಾರ ನೀಡಲು ಕೇಳಿದಾಗ ತಡವಾಗಿ ದೂರು ನೀಡಿದ ಕಾರಣ ಪರಿಹಾರ ನೀಡಲು ತಿರಸ್ಕರಿಸಿದ್ದರಿಂದ ಪರಿಹಾರ ಹಣಕ್ಕಾಗಿ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷೆ ಸುನಂದಾ ಹಾಗೂ ಸದಸ್ಯೆ ಮಹೇಶ್ವರಿ ಬಿ.ಎಸ್. ಅವರು ವಾಹನ ಮಾಲಿಕನಿಗೆ ₹35,214ಗಳನ್ನು ವಾರ್ಷಿಕ ಶೇ 9ರ ಬಡ್ಡಿ ಸೇರಿಸಿ ದೂರು ದಾಖಲಾದ ದಿನದಿಂದ ಪೂರ್ಣ ಪ್ರಮಾಣ ಹಣವನ್ನು ಈ ಆದೇಶವಾದ ಆರು ವಾರದೊಳಗೆ ನೀಡಬೇಕು. ಮಾನಸಿಕ ವ್ಯಥೆಗಾಗಿ ₹3 ಸಾವಿರ ಹಾಗೂ ಪ್ರಕರಣದ ಖರ್ಚಿಗಾಗಿ ₹1 ಸಾವಿರ ನೀಡಬೇಕು. ಇದಕ್ಕೆ ತಪ್ಪಿದಲ್ಲಿ ಪರಿಹಾರದ ಒಟ್ಟು ಮೊತ್ತಕ್ಕೆ ಶೇ 10ರ ಬಡ್ಡಿ ಸೇರಿಸಿ ಪೂರ್ಣ ಪ್ರಮಾಣದಲ್ಲಿ ನೀಡಬೇಕು ಎಂದು ಆದೇಶಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.