ಹಾವೇರಿ: ಕೊರೊನಾಸೋಂಕಿನಿಂದ ರಕ್ಷಿಸಿಕೊಳ್ಳಲು ಜನರು ಸ್ವಯಂ ಜಾಗೃತರಾಗಬೇಕು ಎಂದು ಶಾಸಕ ನೆಹರು ಓಲೇಕಾರ ಹೇಳಿದರು.
ಇಲ್ಲಿನ ತರಳಬಾಳು ಬಡಾವಣೆ ಪಕ್ಕದಲ್ಲಿರುವ ವಲಸಿಗರ ಕುಟುಂಬಗಳಿಗೆ ಚೈತನ್ಯ ಗಾಮೀಣಾಭಿವೃದ್ದಿ ಸಂಸ್ಥೆ ಹಾಗೂ ನಗರಸಭೆ ಹಾವೇರಿ ವತಿಯಿಂದ ಕೋವಿಡ್ ನಿಯಂತ್ರಣ ಸಾಮಗ್ರಿ ಹಾಗೂ ಆಹಾರ ಕಿಟ್ಗಳನ್ನು ವಿತರಿಸಿ ಮಾತನಾಡಿದರು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೋವಿಡ್ ಎರಡನೇ ಅಲೆಯು ಭೀಕರವಾಗಿದ್ದು, ದೇಶದಲ್ಲಿ ಪ್ರತಿದಿನ 3 ಲಕ್ಷ ಜನರು ಸೋಂಕಿನಿಂದ ಬಳಲುತ್ತಿದ್ದು, ಮೂರು ಸಾವಿರ ಜನ ಸಾಯುತ್ತಿದ್ದಾರೆ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಕೋವಿಡ್ ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು ಎಂದರು.
‘ಆರೋಗ್ಯವೇ ಭಾಗ್ಯ’, ನಾವು ಆರೋಗ್ಯವಾಗಿದ್ದರೆ ಏನನ್ನಾದರೂ ಸಾಧಿಸಬಹುದು. ಆರೋಗ್ಯ ಕ್ಷೀಣಿಸಿದರೆ, ಎಲ್ಲವೂ ಕಳೆದುಕೊಂಡಂತೆ. ಎಲ್ಲರೂ ಸುರಕ್ಷತಾ ಕ್ರಮಗಳನ್ನು ಪಾಲಿಸೋಣ ಎಂದರು.
ನಗರಸಭೆಯ ಆಯುಕ್ತ ಪಿ.ಎಂ. ಚಲವಾದಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್. ಮಜೀದ್, ನಗರಸಭಾ ಸದಸ್ಯ ಜಗದೀಶ ಮಲಗೋಡ, ಲಲಿತಾ ಗುಂಡೇನಹಳ್ಳಿ, ಬಾಬುಸಾಬ್ ಮೋಮಿನಗಾರ, ಶ್ರೀಕಾಂತ ಪೂಜಾರ, ಶಿವರಾಜ್ ಮತ್ತಿಹಳಿ, ಹಾಗೂ ಗೀತಾ ಪಾಟೀಲ್, ನಗರಸಭೆಯ ಅಧಿಕಾರಿಗಳಾದ ಮಧು ಸುಂಕಾಪೂರ, ಶೋಭಾ ಊದಗಟ್ಟಿ ಇದ್ದರು.
ಮಾರುತಿ ಹರಿಜನ ಸ್ವಾಗತಿಸಿ, ಶಿವಾನಂದ ಗದಿಗೇರ ವಂದಿಸಿದರು. ಸುಮಾರು 150 ಮಂದಿಗೆ ಆಹಾರ ಕಿಟ್ ಹಾಗೂ ಕೋವಿಡ್ ನಿಯಂತ್ರಣ ಕಿಟ್ಗಳನ್ನು ವಿತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.