ಹಾವೇರಿ: ಕೋವಿಡ್–19ನಿಂದ ಮೂರು ಜನ ಗುಣಮುಖರಾಗಿದ್ದು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಸೋಮವಾರ ಬಿಡುಗಡೆ ಮಾಡಲಾಯಿತು. ಚೇತರಿಕೆಗೆ ಆಸ್ಪತ್ರೆಯ ವೈದ್ಯರು ಹಾಗೂ ಶುಶ್ರೂಷಕಿಯರು, ಅರೆವೈದ್ಯಕೀಯ ಸಿಬ್ಬಂದಿ ಚಪ್ಪಾಳೆತಟ್ಟುವ ಮೂಲಕ ಗುಲಾಬಿ ಹೂ ನೀಡಿ ಶುಭ ಹಾರೈಸಿದರು.
ಸವಣೂರ ಎಸ್.ಎಂ.ಕೃಷ್ಣ ನಗರದ ನಿವಾಸಿ 55 ವರ್ಷದ ಮಹಿಳೆ (ಪಿ -1689), ಯಲವಿಗಿ ಗ್ರಾಮದ 27 ವರ್ಷದ ಮಹಿಳೆ (ಪಿ-1690) ಹಾಗೂ ಬಂಕಾಪುರ ನಿವಾಸಿ 22 ವರ್ಷದ ಚಾಲಕ (ಪಿ-1691) ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು.
ಇವರನ್ನು ಸರ್ಕಾರಿ ಆಂಬುಲೆನ್ಸ್ ಮೂಲಕ ಅವರವರ ಮನೆಗಳಿಗೆ ಕಳುಹಿಸಲಾಯಿತು. ಬಿಡುಗಡೆಯಾದ ಕೃಷ್ಣಾ ನಗರದ ನಿವಾಸಿ ಮಹಿಳೆಗೆ ಯಾವುದೇ ಪ್ರವಾಸ ಹಿನ್ನೆಲೆ ಇರಲಿಲ್ಲ. ಬಂಕಾಪುರ ಹಾಗೂ ಯಲವಿಗಿಯ ಸೋಂಕಿತರಿಗೆ ಮುಂಬೈ ಪ್ರವಾಸ ಹಿನ್ನೆಲೆ ಹೊಂದಿದವರಾಗಿದ್ದರು. ಗಂಟಲು ದ್ರವ ಪರೀಕ್ಷೆಯಲ್ಲಿ ಇವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.
ಗುಣಮುಖರಾಗಿ ಸೋಮವಾರ ಬಿಡುಗಡೆ ಹೊಂದಿದ ಪಿ-1689 ವ್ಯಕ್ತಿ ಸವಣೂರ ಪಟ್ಟಣದ ಕಂಟೈನ್ಮೆಂಟ್ ಪ್ರದೇಶದ ಎಸ್.ಎಂ.ಕೃಷ್ಣ ನಗರದ ನಿವಾಸಿಯಾಗಿದ್ದರು. 27 ವರ್ಷದಮಹಿಳೆ ಪಿ-1690 ಸವಣೂರ ತಾಲ್ಲೂಕು ಯಲವಗಿ ಗ್ರಾಮದ ನಿವಾಸಿ ಬಿ.ಎಸ್ಸಿ ನರ್ಸಿಂಗ್ ವ್ಯಾಸಂಗ ಮುಗಿಸಿ ಸಿ.ಎಚ್.ಒ ತರಬೇತಿಗಾಗಿ ಮುಂಬೈನಲ್ಲಿದ್ದ ಈ ಮಹಿಳೆ ಸೇವಾ ಸಿಂಧು ಪಾಸ್ ಪಡೆದು ಹಾವೇರಿಗೆ ಮೇ 19ರಂದು ಆಗಮಿಸಿದ್ದರು.
22 ವರ್ಷದ ಪಿ-1691 ವ್ಯಕ್ತಿ ಚಾಲಕ ಬಂಕಾಪುರ ನಿವಾಸಿಯಾಗಿದ್ದಾನೆ. ಈ ವ್ಯಕ್ತಿ ಬಂಕಾಪುರದಿಂದ ಮೆಣಸಿನಕಾಯಿ ಲೋಡ್ ತೆಗೆದುಕೊಂಡು ಮೂರು ಬಾರಿ ಮುಂಬೈನ ‘ವಾಸಿ' ಮಾರುಕಟ್ಟೆಯ ಕೋಲ್ಡ್ ಸ್ಟೋರೇಜ್ಗೆ ಹೋಗಿಬಂದಿದ್ದ. ಮೇ 22ರಂದು ಈ ಮೂವರಿಗೆ ಕೋವಿಡ್ ಸೋಂಕು ದೃಢಪಟ್ಟ ವರದಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆರ್ಎಂಒ ಡಾ.ಸುರೇಶ ಪೂಜಾರ ಮಾತನಾಡಿ, ಈಗಾಗಲೇ ಆರು ಜನ ಸೋಂಕಿತರು ಗುಣಮುಖರಾಗಿದ್ದು, ಉಳಿದವರು ಶೀಘ್ರದಲ್ಲಿಯೇ ಗುಣಮುಖರಾಗಲಿದ್ದರೆ. ಅವರ ಕೊನೆಯ ವರದಿ ಬಂದ ನಂತರ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಕೊರೊನಾ ನೋಡಲ್ ಅಧಿಕಾರಿ ಡಾ.ವಿಶ್ವನಾಥ ಸಾಲಿಮಠ, ಡಾ.ಎಲ್.ಎಲ್. ರಾಥೋಡ, ಡಾ.ನಿರಂಜನ, ಪ್ರಭಾರ ನರ್ಸಿಂಗ್ ಅಧೀಕ್ಷಕರಾದ ರಾಜೇಶ್ವರಿ ಭಟ್, ಆಸ್ಪತ್ರೆಯ ಸಿಬ್ಬಂದಿ, ವೈದ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.