ADVERTISEMENT

ಕೋವಿಡ್ ನಿಯಂತ್ರಿಸಲು ತಂಡ ರಚಿಸಿ: ಮನೋಜ್ ಜೈನ್ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 14:52 IST
Last Updated 7 ಆಗಸ್ಟ್ 2020, 14:52 IST
ಹಾವೇರಿ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್‌ ಜೈನ್‌ ನೆರೆ ಪರಿಸ್ಥಿತಿ ಅವಲೋಕಿಸಿದರು 
ಹಾವೇರಿ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್‌ ಜೈನ್‌ ನೆರೆ ಪರಿಸ್ಥಿತಿ ಅವಲೋಕಿಸಿದರು    

ಹಾವೇರಿ: ಚುನಾವಣೆ ಹಾಗೂ ವಿಪತ್ತು ನಿರ್ವಹಣೆ ಮಾದರಿಯಲ್ಲಿ ಕೋವಿಡ್ ವೈರಾಣು ವೇಗವಾಗಿ ಹರಡುವುದನ್ನು ತಡೆಯಲು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಂತದಲ್ಲಿ ತಂಡಗಳನ್ನು ರಚಿಸಿ ಕಾರ್ಯನಿರ್ವಹಿಸುವಂತೆ ಆರೋಗ್ಯ ಅಧಿಕಾರಿಗಳಿಗೆ ಹಾಗೂ ತಹಶೀಲ್ದಾರ್‌ಗಳಿಗೆಹಾವೇರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್ ನಿಯಂತ್ರಣ ಕುರಿತಂತೆ ಆರೋಗ್ಯ ಇಲಾಖೆ ಹಾಗೂ ತಹಶೀಲ್ದಾರಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ತಂಡಗಳನ್ನು ರಚನೆ ಮಾಡಿಕೊಂಡು ಮನೆ– ಮನೆಗೆ ತೆರಳಿ ಎರಡನೇ ಸುತ್ತಿನ ಆರೋಗ್ಯ ಸಮೀಕ್ಷೆ ಆರಂಭಿಸಬೇಕು. ಶನಿವಾರದಿಂದ ಸರ್ವೆ ಕಾರ್ಯ ಆರಂಭಿಸಬೇಕು, ಆ.15ರೊಳಗಾಗಿ ಸರ್ವೆ ಪೂರ್ಣಗೊಳಿಸಬೇಕು. ಆಗಸ್ಟ್ ಕೊನೆಯ ವೇಳೆಗೆ ಪಾಸಿಟಿವ್ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿರುವ ಹಾವೇರಿ, ರಾಣೆಬೆನ್ನೂರು ಹಾಗೂ ಹಿರೇಕೆರೂರು ತಾಲ್ಲೂಕುಗಳಲ್ಲಿ ಹೆಚ್ಚುವರಿ ತಂಡ ರಚನೆ ಮಾಡಿ, ಪ್ರಕರಣಗಳು ಹೆಚ್ಚು ಇರುವ ಪ್ರದೇಶಗಳಲ್ಲಿ ಆದ್ಯತೆ ಮೇಲೆ ಸಮೀಕ್ಷೆ, ಪರೀಕ್ಷೆ, ಚಿಕಿತ್ಸೆ, ಸಂಪರ್ಕ ಪತ್ತೆ, ಸಂಪರ್ಕ ಕಡಿತದಂತಹ ಕಾರ್ಯಗಳನ್ನು ಕ್ಷಿಪ್ರ್ರಗತಿಯಲ್ಲಿ ಕೈಗೊಂಡು ಪರಿಣಾಮಕಾರಿಯಾಗಿ ಸೋಂಕು ತಡೆಗೆ ಕ್ರಮವಾಗಬೇಕು ಎಂದು ಸೂಚಿಸಿದರು.

ಆಶಾ, ಅಂಗನವಾಡಿ, ಕಿರಿಯ ಆರೋಗ್ಯ ಸಹಾಯಕರು, ಶಿಕ್ಷಕರು ಸೇರಿದಂತೆ ಎಲ್ಲ ಹಂತದ ಅಧಿಕಾರಿ ಸಿಬ್ಬಂದಿಯನ್ನು ಬಳಸಿಕೊಂಡು ಸಮೀಕ್ಷಾ ತಂಡ ರಚಿಸಿ ತರಬೇತಿ ನೀಡಬೇಕು. ಪಾಸಿಟಿವ್ ವ್ಯಕ್ತಿಗಳ ಆಸ್ಪತ್ರೆಗೆ ಸ್ಥಳಾಂತರಕ್ಕೆ ಅಗತ್ಯವಾದ ಆಂಬುಲೆನ್ಸ್‌ ವ್ಯವಸ್ಥೆ ಮಾಡಿಕೊಳ್ಳಬೇಕು. ಕೊರತೆಯಾದರೆ ಖಾಸಗಿ ಆಂಬುಲೆನ್ಸ್‌ ಪಡೆಯಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.