ADVERTISEMENT

ಕರಾವಳಿ ಘಟನೆ: ತಪ್ಪಿತಸ್ಥರ ಎನ್‌ಕೌಂಟರ್‌ಗೆ ಬಸವರಾಜ ಹೊರಟ್ಟಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 13:25 IST
Last Updated 30 ಜುಲೈ 2022, 13:25 IST
   

ಹಾವೇರಿ: ‘ಕರಾವಳಿಯಲ್ಲಿ ನಡೆದ ಘಟನೆಗಳು ಇಡೀ ರಾಜ್ಯಕ್ಕೆ ನೋವು ತರುವ ಸಂಗತಿಗಳು. ಇಂಥ ವಿಚಾರದಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಹೈದರಾಬಾದ್‌ನಲ್ಲಿ ಐಪಿಎಸ್‌ ಅಧಿಕಾರಿ ವಿಶ್ವನಾಥ ಸಜ್ಜನರ ತಂಡ ಎನ್‌ಕೌಂಟರ್‌ ಮಾಡಿದ ರೀತಿಯಲ್ಲೇ ನಮ್ಮ ರಾಜ್ಯದಲ್ಲೂ ಎನ್‌ಕೌಂಟರ್‌ ಮಾಡಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿ ಶನಿವಾರ ಸನ್ಮಾನ ಸಮಾರಂಭಕ್ಕೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕರಾವಳಿಯಲ್ಲಿ ನಡೆದ ಘಟನೆಗಳು ಮರುಕಳಿಸಬಾರದು. ಇಂಟಲಿಜೆನ್ಸ್‌ನವರು ಸಿಎಂಗೆ ಮುಂಚಿತವಾಗಿ ಮಾಹಿತಿ ಕೊಡಬೇಕು. ಇಂಥ ಸಂದರ್ಭದಲ್ಲಿ ಪೊಲೀಸರು ಒಂದು ತಪ್ಪು ಮಾಡಿದರೆ ಅದನ್ನು ನಾನು ತಪ್ಪು ಅನ್ನುವುದಿಲ್ಲ ಎಂದರು.

ಇದುವರೆಗೂ ನಡೆದ ಹತ್ಯೆ ಪ್ರಕರಣಗಳಲ್ಲಿ ಶಿಕ್ಷೆ ಆಗಿದ್ದು ಜನರಿಗೆ ಗೊತ್ತೇ ಆಗಿಲ್ಲ. ಆ ರಿಪೋರ್ಟ್‌ ಈ ರಿಪೋರ್ಟ್‌ ಎನ್ನುವ ವೇಳೆಗೆ ಜನರು ಘಟನೆಯನ್ನು ಮರೆತು ಬಿಡುತ್ತಾರೆ. ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಸಿಎಂ ಗಟ್ಟಿ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.

ADVERTISEMENT

ರಾಜಕೀಯಕ್ಕಾಗಿ ಪರಸ್ಪರ ಟೀಕೆ ಮಾಡುವುದಕ್ಕಿಂತ ಎಲ್ಲರೂ ರಾಜ್ಯದ ಶಾಂತಿ–ಸುವ್ಯವಸ್ಥೆ ಕಾಪಾಡಬೇಕು. ವಿರೋಧ ಪಕ್ಷದವರು ಬರೀ ಟೀಕೆ ಮಾಡುತ್ತಾ ಕುಳಿತರೆ ಆಗುವುದಿಲ್ಲ. ವಿರೋಧ ಪಕ್ಷದವರನ್ನು ಕರೆದು ಸಿಎಂ ಅವರು ಸಭೆ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.