ADVERTISEMENT

ಮದ್ಯದಂಗಡಿ ಬಂದ್‌ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2025, 16:07 IST
Last Updated 7 ಫೆಬ್ರುವರಿ 2025, 16:07 IST
ಬ್ಯಾಡಗಿ ತಾಲ್ಲೂಕಿನ ತಿಮ್ಮೇನಹಳ್ಳಿಯಲ್ಲಿ ಆರಂಭವಾಗಿರುವ ಮದ್ಯದಂಗಡಿಯನ್ನು ಬಂದ್‌ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು
ಬ್ಯಾಡಗಿ ತಾಲ್ಲೂಕಿನ ತಿಮ್ಮೇನಹಳ್ಳಿಯಲ್ಲಿ ಆರಂಭವಾಗಿರುವ ಮದ್ಯದಂಗಡಿಯನ್ನು ಬಂದ್‌ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು   

ಬ್ಯಾಡಗಿ: ತಾಲ್ಲೂಕಿನ ತಿಮ್ಮೇನಹಳ್ಳಿ ಗ್ರಾಮದಲ್ಲಿ ಅನಧಿಕೃತ ಮದ್ಯದಂಗಡಿ ಆರಂಭವಾಗಿದ್ದು, ಅದನ್ನು ಕೂಡಲೇ ಬಂದ್‌ ಮಾಡುವಂತೆ ಆಗ್ರಹಿಸಿ ಅಲ್ಲಿಯ ಗ್ರಾಮಸ್ಥರು ಶುಕ್ರವಾರ ಮದ್ಯದಂಗಡಿ ಎದುರು ಪ್ರತಿಭಟನೆ ನಡೆಸಿದರು.

ಮುಖಂಡ ಹನುಮಂತಪ್ಪ ಮಾಳಗಿ ಮಾತನಾಡಿ, ‘ಬಿಸಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರ ಮದ್ಯದಂಗಡಿ ತೆರೆಯಲು ಯಾರಿಗೂ ಪರವಾನಗಿ ನೀಡಿಲ್ಲ. ಕೂಡಲೇ ಬಂದ್‌ ಮಾಡಬೇಕು’ ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಷಣ್ಮುಖಪ್ಪ ಮುಚ್ಚಟ್ಟಿ ಮಾತನಾಡಿ, ‘ಮದ್ಯದಂಗಡಿ ಇರುವ ಮಾರ್ಗದಲ್ಲಿ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿವೆ. ಸಾವಿರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. ಸುತ್ತಲೂ ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಾರೆ. ಈ ಭಾಗದಲ್ಲಿ ಮದ್ಯದಂಗಡಿ ತೆರೆದಿರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ತೊಂದರೆಯಾಗಲಿದ್ದು, ಮದ್ಯದಂಗಡಿ ತೆರೆಯಲು ಗ್ರಾಮಸ್ಥರು ಬಿಡುವುದಿಲ್ಲ’ ಎಂದು ಎಚ್ಚರಿಸಿದರು.

ADVERTISEMENT

‘ಈಗಾಗಲೇ ಗೂಡಂಗಡಿಗಳಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ಯುವಕರು ಮದ್ಯದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಮದ್ಯದಂಗಡಿ ಬಂದ್‌ ಮಾಡದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ತಿಳಿಸಿದರು.

ವೀರನಗೌಡ ಪಾಟೀಲ, ಚನ್ನಪ್ಪ ಮುಚ್ಚಟ್ಟಿ, ಭರಮಪ್ಪ ಮೆಡ್ಲೇರಿ, ಚಂದ್ರಪ್ಪ ಪವಾಡ, ಪುಟ್ಟಪ್ಪ ಹಾವೇರಿ, ಮಲಕಪ್ಪ ಕಾಕೊಳ, ಬಸವರಾಜ ಕಾಕೊಳ, ಕರಬಸಪ್ಪ ಹಾವೇರಿ, ದುರ್ಗಪ್ಪ ಓಲೇಕಾರ, ಸುರೇಶ ಹೊಸಳ್ಳಿ, ಬಸಪ್ಪ ಮೆಡ್ಲೇರಿ, ಸಂಕಪ್ಪ ಹಾವನೂರ, ನಿಂಗಪ್ಪ ಹಾವನೂರ, ಹನಮಂತಪ್ಪ ಸಂಕನಗೌಡ್ರ,ರಾಮನಗೌಡ ಮೈಲಾರ, ಬಸಪ್ಪ ಹಾವೇರಿ, ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.