ಹಾವೇರಿ: ಹರಿಹರದ ‘ಹರಜಾತ್ರೆ’ ವೇದಿಕೆಯಲ್ಲಿ ನಡೆದ ಘಟನೆಗೆ ಸಮಸ್ತ ಕಾವಿಧಾರಿಗಳ ಪರವಾಗಿ ಮುಖ್ಯಮಂತ್ರಿ ಸಿ.ಎಂ.ಯಡಿಯೂರಪ್ಪ ಅವರಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದು ಬಾಲೇಹೊಸೂರ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ನರಸೀಪುರ ಸುಕ್ಷೇತ್ರದಲ್ಲಿ ಬುಧವಾರ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ 900ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ಆಕಳನ್ನು ರಮಿಸಿ ಹಾಲು ಪಡೆಯಬೇಕೇ ಹೊರತು, ಬೆದರಿಸಿದರೆ ಪ್ರಯೋಜನವಾಗುವುದಿಲ್ಲ. ಯಾರೇ ತಂಬಿಗೆ ತಂದರೂ ಹಾಲು ಕೊಡುವ ಆಕಳು ಇದ್ದ ಹಾಗೆ ಯಡಿಯೂರಪ್ಪ. ಯಾವುದೇ ಗಾಳಿ, ಬಿರುಗಾಳಿ ಬೀಸಿದರೂ ‘ಗುಡ್ಡ’ ಅಲುಗಾಡುವುದಿಲ್ಲ. ಅದೇ ರೀತಿ ಗುಡ್ಡದ ಹಾಗೆ ಯಡಿಯೂರಪ್ಪ ಗಟ್ಟಿಯಾಗಿರಬೇಕು. ಯಾವ ಭಯವೂ ಇಲ್ಲದೆ ನಿಮ್ಮದೇ ವಿವೇಚನೆಯಲ್ಲಿ ರಾಜ್ಯವನ್ನು ಮುನ್ನಡೆಸಿ ಎಂದು ಧೈರ್ಯ ತುಂಬುವ ಪ್ರಯತ್ನ ಮಾಡಿದರು.
ಆರು ಕೋಟಿ ಜನರೆಂಬ ಮೊಬೈಲ್ಗಳಿಗೆ ಬಿ.ಎಸ್.ಯಡಿಯೂರಪ್ಪ ಅವರು ‘ದೊಡ್ಡ ಟವರ್’ ಇದ್ದ ಹಾಗೆ. ಯಾವುದೇ ಜಾತಿಯನ್ನು ತಲೆಯಲ್ಲಿ ಇಟ್ಟುಕೊಳ್ಳದೆ, ನಾಡಿನ ಸಮಸ್ತ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅಂಬಿಗರ ಚೌಡಯ್ಯ ಹುಟ್ಟಿದ ನಾಡು ಹಾವೇರಿ ‘ನಂಬಿಕಸ್ಥರ ನಾಡು’. ಈ ಜಿಲ್ಲೆಯ ಆರ್.ಶಂಕರ್ ಮತ್ತು ಯು.ಬಿ.ಬಣಕಾರ ಅವರ ತ್ಯಾಗದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.