ಸವಣೂರು: ಆರೋಗ್ಯವಂತ ಪ್ರತಿಯೊಬ್ಬ ಯುವಕರು ಪ್ರತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡಿ, ಅನಾರೋಗ್ಯದಿಂದ ಬಳಲುವ ರೋಗಿಗಳ ಜೀವವನ್ನು ಉಳಿಸಲು ರಕ್ತದಾನಕ್ಕೆ ಮುಂದಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಜಿಲ್ಲಾ ರಕ್ತ ಕೇಂದ್ರದ ಡಾ.ಯಶವಂತ ಎಚ್.ಎನ್. ಹೇಳಿದರು.
ತಾಲ್ಲೂಕಿನ ತೊಂಡೂರ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರೌಢ ಶಾಲೆಯಲ್ಲಿ ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ಅವರ ಜನ್ಮದಿನದ ಅಂಗವಾಗಿ ಸ್ವಾಮಿ ವಿವೇಕಾನಂದ ಯುವಕ ಮಂಡಳಿ ತೊಂಡೂರ, ಜಿಲ್ಲಾ ರಕ್ತ ಕೇಂದ್ರ, ಸಾರ್ವಜನಿಕ ಆಸ್ಪತ್ರೆ ಸವಣೂರ ಹಾಗೂ ಅಮ್ಮಾ ಸಂಸ್ಥೆಯಿಂದ ಭಾನುವಾರ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದ ಯುವಕ ಮಂಡಳಿಯ ಅಧ್ಯಕ್ಷ ಉಮೇಶ ಆಲದಕಟ್ಟಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೆ ಆರೋಗ್ಯ ಬಹಳ ಮುಖ್ಯ ಎಂಬ ಉದ್ದೇಶದಿಂದ ಮತ್ತೊಬ್ಬರ ಜೀವ ಉಳಿಸುವ ರಕ್ತದಾನ ಮಾಡಬೇಕು ಎಂದು ನಾವೆಲ್ಲರೂ ತೀರ್ಮಾನಿಸಿ ಈ ಕಾರ್ಯ ಮಾಡುತ್ತಿದ್ದೇವೆ. ಸಾರ್ವಜನಿಕರಿಗೆ ಉಪಯುಕ್ತವಾಗಲು ನಮ್ಮ ಯುವಕ ಮಂಡಳಿಯ ಪದಾಧಿಕಾರಿಗಳು ರಕ್ತದಾನ ಮಾಡಲು ಮುಂದಾಗುತ್ತೇವೆ. 16 ಜನ ಯುವಕರು ರಕ್ತದಾನ ಮಾಡಿದರು. ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಶಾಲಾ ಎಸ್ಡಿಎಂಸಿ ಅಧ್ಯಕ್ಷ ನಿಂಗಪ್ಪ ಡವಗಿ ರಕ್ತದಾನ ಮಾಡಿ ಮಾತನಾಡಿದರು. ಅಮ್ಮಾ ಸಂಸ್ಥೆಯ ನಿಂಗಪ್ಪ ಆರೇರ, ತಾಲ್ಲೂಕ ಆಸ್ಪತ್ರೆಯ ಮಹಾಂತೇಶ ಹೊಳೆಮ್ಮನವರ, ನೂರಅಹ್ಮದ ಮುಲ್ಲಾ, ಪ್ರತಾಪ ಡವಗಿ, ಅಶೋಕ ಕಾಳಿ, ಶಂಭಣ್ಣ ದೇವಗಿರಿ, ಮಹಾವೀರ ಕಾಳಪ್ಪನವರ, ಇಸ್ಮಾಯಿಲ್ ಮಂಟಗಣಿ,ನಾಗರಾಜ ಅಂಗಡಿ, ಸಾಗರ ಆಲದಕಟ್ಟಿ, ನಿಯಾಜ್ ಮುಲ್ಲಾ, ಪರಶುರಾಮ ಕಿಳ್ಳಿಕ್ಯಾತರ, ಕುರವತ್ತಿಗೌಡ ಪಾಟೀಲ, ಮುತ್ತುಕುಮಾರ ವಾಲ್ಮೀಕಿ, ಅಶೋಕ ಬೆಣ್ಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.