ADVERTISEMENT

ಕ್ಲಸ್ಟರ್ ಮಟ್ಟದ ವಾರ್ಷಿಕ ಪರೀಕ್ಷಾ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 16:09 IST
Last Updated 8 ಮಾರ್ಚ್ 2024, 16:09 IST
ತುಮ್ಮಿನಕಟ್ಟಿ ಗ್ರಾಮದ ಸಂಗನಬಸವೇಶ್ವರ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರಿಗಾಗಿ ಏರ್ಪಡಿಸಿದ್ದ ವಾರ್ಷಿಕ ಪರೀಕ್ಷಾ ಪೂರ್ವಭಾವಿ ಸಭೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಎಚ್ ಪಾಟೀಲ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು
ತುಮ್ಮಿನಕಟ್ಟಿ ಗ್ರಾಮದ ಸಂಗನಬಸವೇಶ್ವರ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರಿಗಾಗಿ ಏರ್ಪಡಿಸಿದ್ದ ವಾರ್ಷಿಕ ಪರೀಕ್ಷಾ ಪೂರ್ವಭಾವಿ ಸಭೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಎಚ್ ಪಾಟೀಲ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು   

ತುಮ್ಮಿನಕಟ್ಟಿ: ಶಿಕ್ಷಕರು ಮಕ್ಕಳಿಗೆ ಪರೀಕ್ಷೆ ಬಗ್ಗೆ ಇರುವ ಭಯವನ್ನು ದೂರಮಾಡಲು ಅಗತ್ಯ ಕ್ರಮವಹಿಸಬೇಕು. ಎಲ್ಲಾ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲು ಅಣಿಗೊಳಿಸುವ ತಮ್ಮ ಈ ಜವಾಬ್ದಾರಿಯನ್ನು ಚಾಚೂ ತಪ್ಪದೇ ನಿರ್ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ಹೇಳಿದರು.

ಇಲ್ಲಿನ ಸಂಗನಬಸವೇಶ್ವರ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಫಲಿತಾಂಶ ಸುಧಾರಣೆ ಹಾಗೂ ವಿದ್ಯಾರ್ಥಿಗಳ ಭಯ, ಆತಂಕ ದೂರ ಮಾಡುವ ಉದ್ದೇಶದಿಂದ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರಿಗಾಗಿ ಏರ್ಪಡಿಸಿದ್ದ ವಾರ್ಷಿಕ ಪರೀಕ್ಷಾ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಪಠ್ಯಪುಸ್ತಕವನ್ನು ಕಷ್ಟಪಟ್ಟು ಓದುವ ಬದಲು ಇಷ್ಟಪಟ್ಟು ಓದಲು ಸೂಕ್ತ ಸಲಹೆ, ನಿದರ್ಶನ ನೀಡುವುದು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಿ ಅವರ ಕಲಿಕೆಯಲ್ಲಿ ಸುಧಾರಣೆ ತರುವ ಮೂಲಕ ಪ್ರೋತ್ಸಾಹಿಸುವುದು ಹೆಚ್ಚು ಉಪಯುಕ್ತ ಎಂದರು.

ADVERTISEMENT

ಈ ಹಿಂದೆ ನಡೆದಿರುವ ಎಲ್ಲಾ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ, ವಿಶ್ಲೇಷಣೆ ಮಾಡುವುದು. ಮಕ್ಕಳಿಗೆ ಚೆನ್ನಾಗಿ ಓದಿಸುವುದು, ಓದಿದ್ದನ್ನು ಬರೆಯಿಸುವುದು, ಗುಂಪು ಚರ್ಚೆ, ಪುನರ್ ಮನನಕ್ಕೆ ಮಕ್ಕಳು ವಿಶೇಷ ಆದ್ಯತೆ ನೀಡುವಂತೆ ಪ್ರೋತ್ಸಾಹಿಸುವುದು, ಮನೆ ಭೇಟಿ, ಪಾಲಕರೊಂದಿಗೆ ಚರ್ಚೆ ನಡೆಸುವುದು ಸೇರಿದಂತೆ ಹಲವಾರು ವಿಶೇಷ ಕ್ರಮವಹಿಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಬೆಳಕು ಚೆಲ್ಲುವ ಮಹತ್ವದ ಕೆಲಸ ನಿಭಾಯಿಸಲು ಮುಂದಾಗಬೇಕು ಎಂದರು.

ಮಕ್ಕಳು ಪರೀಕ್ಷೆಯಲ್ಲಿ ದೋಷರಹಿತ ಅಂದವಾದ ಬರವಣಿಗೆ ರೂಢಿಸಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂಬರುವ ಮೌಲ್ಯಾಂಕನ ಪರೀಕ್ಷೆ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುವ ಮೂಲಕ ಅವರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಬೇಕು ಸಲಹೆ ನೀಡಿದರು

ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆ ವಿದ್ಯಾರ್ಥಿನಿ ಕು.ಸಂಜನಾ ವೆಂಕಟೇಶ ರೇವಣಕರಗೆ ಬಿಇಒ ಎಂ. ಎಚ್. ಪಾಟೀಲ ಬಹುಮಾನ ವಿತರಿಸಿದರು.

ಮುಖ್ಯ ಶಿಕ್ಷಕ ಪರಮೇಶ್ವರ ನಾಯ್ಕ್ . ಎಚ್. ಬಿ., ಫಕ್ಕೀರಪ್ಪ ಬಿಸಲಹಳ್ಳಿ, ಸಿಆರ್ ಸಿ ಆರ್. ಜಿ ಲಮಾಣಿ, ಪಿ. ಎಚ್ ಹಿತ್ತಲಮನಿ, ಎಸ್. ಎಸ್ ಮಧ್ಯಾಹ್ನದ, ಕ್ಲಸ್ಟರ್ ಮಟ್ಟದ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.