ಹಾನಗಲ್: ತಾಲ್ಲೂಕಿನ ಹಿರೇಕಣಗಿ ಅರಣ್ಯ ಭಾಗದಲ್ಲಿದ್ದ ಕಾಡಾನೆಗಳು ಶುಕ್ರವಾರ ರಾತ್ರಿ ಕಾಮನಹಳ್ಳಿ ವ್ಯಾಪ್ತಿಯ ಬಾಳೆ ತೋಟವನ್ನು ಹಾನಿಗೊಳಿಸಿವೆ.
ಗುರುವಾರ ರಾತ್ರಿ ಚಿಕ್ಕೇರಿಹೊಸಳ್ಳಿ ವ್ಯಾಪ್ತಿಯಲ್ಲಿ ದಾಂಗುಡಿ ಇಟ್ಟಿದ್ದ ತಾಯಿ ಮತ್ತು ಮಗು ಆನೆ ಕಾಮನಹಳ್ಳಿಯ ರೈತ ಮುತ್ತಣ್ಣ ಪೂಜಾರ ಅವರ ಬಾಳೆತೋಟಕ್ಕೆ ಶುಕ್ರವಾರರಾತ್ರಿ 10 ಗಂಟೆಗೆ ನುಗ್ಗಿ ಸುಮಾರು 50 ಬಾಳೆ ಗಿಡಗಳನ್ನು ಸವರಿ ಹಾಕಿವೆ. ಅಡಿಕೆ ಮರಗಳನ್ನು ಧ್ವಂಸ ಮಾಡಿವೆ.
ತೋಟದಲ್ಲಿ ಮನೆ ಮಾಡಿಕೊಂಡಿರುವ ಮುತ್ತಣ್ಣ ಆನೆಗಳನ್ನು ಓಡಿಸಲು ಬೆಂಕಿ ಹೊತ್ತಿಸಿಕೊಂಡು ಶಬ್ದ ಮಾಡಿದ್ದರಿಂದ ಆನೆಕರೆ ಭಾಗದತ್ತ ಆನೆಗಳು ಕಾಲ್ಕಿತ್ತಿವೆ. ರಾತ್ರಿಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು. ಕಾಮನಹಳ್ಳಿ ವ್ಯಾಪ್ತಿಯ ನಾಲ್ಕೈದು ತೋಟಗಳು ದಾಳಿಗೆ ತುತ್ತಾಗಿವೆ.
ಈ ಬಗ್ಗೆ ಮಾಹಿತಿ ನೀಡಿರುವ ವಲಯ ಅರಣ್ಯಾಧಿಕಾರಿ ಪರಮೇಶ್ವರಪ್ಪ ಪೇಲನವರ, 'ಗುರುವಾರ ಕಂಡಿದ್ದ ಆನೆಗಳೇ ಮತ್ತೆ ದಾಳಿ ಮಾಡಿವೆ. ಸದ್ಯ ಹಿರೇಕಣಗಿ ಅರಣ್ಯದಲ್ಲಿವಿಶ್ರಮಿಸುತ್ತಿರುವ ಆನೆಗಳನ್ನು ರಾತ್ರಿ ಹೊತ್ತಲ್ಲಿ ಕಾತೂರ ಅರಣ್ಯ ಭಾಗಕ್ಕೆ ಅಟ್ಟಲಾಗುವುದು. ಈ ವ್ಯಾಪ್ತಿಯಲ್ಲಿ ರಾತ್ರಿ ಹೊತ್ತಿನಲ್ಲಿ ರೈತರು ಹೊಲ, ಗದ್ದೆಗಳಿಗೆ ಹೋಗಬಾರದು’ ಎಂದು ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.