ADVERTISEMENT

ಕಾರ್ಖಾನೆಗಳ ಷರತ್ತುಬದ್ಧ ಆರಂಭಕ್ಕೆ ಸೂಚನೆ

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಿಂದ ಅನುಮತಿ: ಸಿಇಒ ರಮೇಶ ದೇಸಾಯಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 13:57 IST
Last Updated 4 ಏಪ್ರಿಲ್ 2020, 13:57 IST
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲೆಯ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಸಿಇಒ ರಮೇಶ ದೇಸಾಯಿ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ.ದಿಲೀಷ್‌ ಶಶಿ ಇದ್ದಾರೆ 
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲೆಯ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಸಿಇಒ ರಮೇಶ ದೇಸಾಯಿ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ.ದಿಲೀಷ್‌ ಶಶಿ ಇದ್ದಾರೆ    

ಹಾವೇರಿ: ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಅವಧಿಯಲ್ಲಿ ಸ್ಥಗಿತಗೊಳಿಸಲಾದ ಅಗತ್ಯ ವಸ್ತುಗಳ ಕಾರ್ಖಾನೆಗಳನ್ನು ಆರೋಗ್ಯ ಇಲಾಖೆಯ ಮಾರ್ಗಸೂಚಿ ಪಾಲಿಸುವ ಷರತ್ತಿನೊಂದಿಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅನುಮತಿ ನೀಡಲಿದ್ದು, ಕಾರ್ಖಾನೆಗಳನ್ನು ಆರಂಭಿಸುವಂತೆ ಜಿಲ್ಲೆಯ ಕೈಗಾರಿಕೋದ್ಯಮಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಕೈಗಾರಿಕೋದ್ಯಮಿಗಳ ಸಭೆ ನಡೆಸಿದ ಅವರು, ರೈತರ ಸಾಮಗ್ರಿಗಳು ಮಾರುಕಟ್ಟೆಗೆ ಹೋಗಬೇಕು. ಗ್ರಾಹಕರಿಗೆ ಅಗತ್ಯ ವಸ್ತುಗಳ ಕೊರತೆಯಾಗಬಾರದು. ಈ ಹಿನ್ನೆಲೆಯಲ್ಲಿ ಕೃಷಿಗೆ ಪೂರಕವಾದ ಕೈಗಾರಿಕೆಗಳು, ದಿನಸಿ ಪೂರಕ ಆಹಾರ ಸಂಸ್ಕರಣ ಘಟಕಗಳು, ಬೇಕರಿ ಸೇರಿದಂತೆ ನಿತ್ಯ ಬಳಕೆಯ ಉತ್ಪಾದನಾ ಘಟಕಗಳನ್ನು ಸುರಕ್ಷತಾ ಮಾನದಂಡವನ್ನು ಅನುಸರಿಸಿ ಆರಂಭಿಸಲು ಅನುಮತಿ ನೀಡಲಾಗುವುದು ಎಂದು ತಿಳಿಸಿದರು.

ಕೃಷಿ ಚಟುವಟಿಕೆಗೆ ಅನುಕೂಲಕರವಾಗುವ ಟ್ರಾಕ್ಟರ್‌ ರಿಪೇರಿ, ಕೃಷಿ ಉಪಕರಣಗಳ ರಿಪೇರಿಗೆ ಯಾವುದೇ ನಿರ್ಭಂಧವಿಲ್ಲ. ಸರಕು ಸಾಗಾಣಿಕೆ ವಾಹನಗಳ ಗ್ಯಾರೇಜ್‍ಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗುವುದು. ಕಾರ್ಖಾನೆ ಮಾಲಿಕರು ತಮ್ಮ ಕಾರ್ಮಿಕರಿಗೆ ಬೇಕಾದ ಪಾಸ್‍ಗಳನ್ನು ಪಡೆಯಬೇಕು ಎಂದು ಸೂಚಿಸಿದರು.

ADVERTISEMENT

ಕೃಷಿ ಸೇವಾ ವಲಯ, ಕೃಷಿ ಬೀಜ ಉತ್ಪಾದನೆ, ರೇಷ್ಮೆ ಮಾರಾಟ, ಹೈನುಗಾರಿಕೆ, ಜಿನ್ನಿಂಗ್, ರಸಗೊಬ್ಬರ, ಆಹಾರ ಸಾಮಗ್ರಿಗಳ ಸಂಸ್ಕರಣೆ, ಗಿರಣಿ, ಎಣ್ಣೆ ಮತ್ತು ಪ್ಯಾಕಿಂಗ್ ಇಂಡಸ್ಟ್ರೀಸ್, ಬೇಕರಿ, ಫಿಶ್‌, ಪೌಟ್ರಿ, ಕ್ಯಾಟಲ್ ಫೀಡ್, ವೈದ್ಯಕೀಯ ಸುರಕ್ಷಾ ಸಾಮಗ್ರಿಗಳಾದ ಮಾಸ್ಕ್, ಸ್ಯಾನಿಟೈಸರ್ ತಯಾರಿಕೆ ಸೇರಿದಂತೆ ಅಗತ್ಯ ವಸ್ತುಗಳ ಉತ್ಪಾದನೆಯನ್ನು ಆರಂಭಿಸಲು ಯಾವುದೇ ಅಭ್ಯಂತರ ಇರುವುದಿಲ್ಲ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಯೊಗೇಶ್ವರ ಮಾತನಾಡಿ, ಕಾರ್ಖಾನೆಗಳ ಆರಂಭಕ್ಕೆ ಸರ್ಕಾರದ ಅಧಿಸೂಚನೆಯಂತೆ ವಿನಾಯಿತಿ ಪಡೆದಿರಬೇಕು. ಕಾರ್ಖಾನೆಯ ಪ್ರವೇಶದಿಂದ ಹಿಡಿದು ಹೊರಗೆ ಬರುವವರೆಗೂ ಅವರಿಗೆ ಕರೋನಾ ವೈರಸ್ ಹರಡದಂತೆ ಮುಂಜಾಗ್ರತೆ ಹಾಗೂ ಸುರಕ್ಷಾ ಮಾರ್ಗಸೂಚಿಗಳನ್ನು ಅಳವಡಿಸಬೇಕು. ಪ್ರತಿ ಕಾರ್ಮಿಕರಿಗೂ ಉತ್ತಮ ಗುಣಮಟ್ಟ ಮಾಸ್ಕ್, ಸ್ಯಾನಿಟೈಸರ್, ಕೈಗವಸು ಒದಗಿಸಬೇಕು. ಕಾರ್ಮಿಕರಿಗೆ ಕೆಲಸಮಾಡುವ ಸ್ಥಳಕ್ಕೆ ಮನೆಯಿಂದ ಹೋಗಲು ಪಾಸ್ ನೀಡಲಾಗುವುದು. ಪಾಸ್ ವ್ಯವಸ್ಥೆಗಾಗಿ ಜಿಲ್ಲಾಡಳಿತ ಭವನದಲ್ಲಿ ‘ಸ್ಪಂದನ’ ಕೇಂದ್ರವನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಕೈಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ವಿನಾಯಕ ಜೋಶಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.