ADVERTISEMENT

‘ಹಗರಣ ಮುಚ್ಚಿಕೊಳ್ಳಲು ಸುಳ್ಳು ಹೇಳಿಕೆ’

ರುದ್ರಪ್ಪ ಲಮಾಣಿ ವಿರುದ್ಧ ಶಿವಕುಮಾರ ಸಂಗೂರ ಆರೋಪ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 15:51 IST
Last Updated 16 ಜೂನ್ 2021, 15:51 IST
ಶಿವಕುಮಾರ ಸಂಗೂರ, ಅಧ್ಯಕ್ಷ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರ
ಶಿವಕುಮಾರ ಸಂಗೂರ, ಅಧ್ಯಕ್ಷ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರ   

ಹಾವೇರಿ: ‘ನಗರ ಆಶ್ರಯ ಸಮಿತಿಯ ವಸತಿ ಯೋಜನೆಯಡಿ 1112 ಫಲಾನುಭವಿಗಳ ಆಯ್ಕೆಯಲ್ಲಿ ಅವರ ಅವಧಿಯಲ್ಲಿ ನಡೆದಿರುವ ಹಗರಣವನ್ನು ಮುಚ್ಚಿಕೊಳ್ಳಲು ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರು ಶಾಸಕ ನೆಹರು ಓಲೇಕಾರ ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ ತಿಳಿಸಿದ್ದಾರೆ.

1112 ಫಲಾನುಭವಿಗಳ ಪಟ್ಟಿಯಲ್ಲಿ ಸುಮಾರು 700ಕ್ಕೂ ಹೆಚ್ಚು ಮಂದಿ ಶ್ರೀಮಂತರು, ಅಂತರಜಿಲ್ಲೆಯವರು, ಒಂದೇ ಕುಟುಂಬಕ್ಕೆ ಸೇರಿದವರು ಇದ್ದರು. ಹೀಗಾಗಿ ನಮ್ಮ ಆಶ್ರಯ ಸಮಿತಿಯು ಸರ್ಕಾರದ ಸುತ್ತೋಲೆ ಅನ್ವಯ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಣೆ ಮಾಡಿ, ಅರ್ಹರ ಪಟ್ಟಿಯನ್ನು ತಯಾರಿಸಿದೆ.

ರುದ್ರಪ್ಪ ಲಮಾಣಿ ಅವರು ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಪಟ್ಟಿ ಬದಲಾವಣೆ ಮಾಡಲು ಈಗಿನ ಆಶ್ರಯ ಸಮಿತಿಗೆ ಅಧಿಕಾರವಿಲ್ಲ’ ಎಂದು ಹೇಳಿದ್ದಾರೆ. ಅನರ್ಹ ಫಲಾನುಭವಿಗಳು ಯಾವುದೇ ಹಂತದಲ್ಲಿ ಕಂಡು ಬಂದರೂ ಪಟ್ಟಿ ರದ್ದುಗೊಳಿಸಿ, ಅರ್ಹರನ್ನು ಆಯ್ಕೆ ಮಾಡಬಹುದು ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ಇದೆಲ್ಲಾ ಗೊತ್ತಿದ್ದರೂ, ರುದ್ರಪ್ಪ ಅವರು ಸುಳ್ಳು ಹೇಳಿಕೆ ನೀಡಿ, ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ದೂರಿದ್ದಾರೆ.

ADVERTISEMENT

ಆಶ್ರಯ ಸಮಿತಿಯ ವಿಚಾರದಲ್ಲಿ ಕಾಂಗ್ರೆಸ್‌ ಏಜೆಂಟರಂತೆ ಕೆಲಸ ಮಾಡುತ್ತಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತ ಆದಿತ್ಯಾ ಅಮ್ಲಾನ್‌ ಬಿಸ್ವಾಸ್‌ ಅವರ ವಿರುದ್ಧ ಮುಖ್ಯಮಂತ್ರಿ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಲಾಗುವುದು ಎಂದು ಆಶ್ರಯ ಸಮಿತಿ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.