
ಹಾನಗಲ್: ‘ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ಹೊಕ್ಕುತ್ತಿದ್ದ ಅವಾಂತರ ತಪ್ಪಿಸುವ ನಿಟ್ಟಿನಲ್ಲಿ ಇಲ್ಲಿನ ಬೃಹತ್ ಆನಿಕೆರೆ ಮತ್ತು ಅಚಗೇರಿ ಕೆರೆ ನಡುವಿನ ಕಚ್ಚಾ ಕಾಲುವೆಯನ್ನು ದುರಸ್ತಿಗೊಳಿಸಲಾಗುತ್ತಿದೆ’ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಸಣ್ಣ ನೀರಾವರಿ ಇಲಾಖೆ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ₹492 ಲಕ್ಷ ವೆಚ್ಚದಲ್ಲಿ ಪಟ್ಟಣದ ಆನಿಕೆರೆಯಿಂದ ಅಚಗೇರಿ ಕೆರೆವರೆಗೆ 1.3 ಕಿ.ಮೀ ಉದ್ದದ ಕಚ್ಚಾ ಕಾಲುವೆ ದುರಸ್ತಿ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಮುಖ್ಯ ರಸ್ತೆಯಲ್ಲಿನ ಗ್ರಾಮದೇವಿ ದೇವಸ್ಥಾನದ ಎದುರಿನ ನೂರಾನಿ ಗಲ್ಲಿಯಿಂದ ಸುರಳೇಶ್ವರ ರಸ್ತೆಯಲ್ಲಿನ ಪುರಸಭೆ ಕಚೇರಿವರೆಗೆ ಮಳೆಗಾಲದಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿತ್ತು. ಇಲ್ಲಿನ ನೂರಾರು ಮನೆಗಳಿಗೆ ಮಳೆ ನೀರು ನುಗ್ಗುತ್ತಿತ್ತು. ಅಲ್ಲದೆ, ಮಂತಗಿ ರಸ್ತೆಯ ಕಂಬಳಗೇರಿ ಕೆರೆ ಮತ್ತು ಇಂದಿರಾ ನಗರದ ಚರಂಡಿ ನೀರು ಪಟ್ಟಣದ ಕುಡಿಯುವ ನೀರಿನ ಪ್ರಮುಖ ಮೂಲ ಆನಿಕೆರೆ ತಲುಪುತ್ತಿತ್ತು. ಈ ಕಾಮಗಾರಿಯಿಂದ ಇವೆಲ್ಲ ಅವಾಂತರ ತಪ್ಪಲಿದೆ’ ಎಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷರಾದ ಯಲ್ಲಪ್ಪ ಕಿತ್ತೂರ, ಮಮತಾ ಆರೆಗೊಪ್ಪ, ಮಾಜಿ ಉಪಾಧ್ಯಕ್ಷ ಮಹೇಶ ಪವಾಡಿ, ಮಾಜಿ ಸದಸ್ಯ ವಿರುಪಾಕ್ಷಪ್ಪ ಕಡಬಗೇರಿ, ಮುಖ್ಯಾಧಿಕಾರಿ ಜಗದೀಶ ವೈ.ಕೆ, ಮುಖಂಡರಾದ ರವಿ ದೇಶಪಾಂಡೆ, ತಮ್ಮಣ್ಣ ಆರೆಗೊಪ್ಪ, ಸಿಕಂದರ ವಾಲಿಕಾರ, ನೌಶಾದ ರಾಣೇಬೆನ್ನೂರ, ಶಿವು ಭದ್ರಾವತಿ, ಜಾಫರ್ ಬಾಳೂರ, ಮುನ್ನಾ ನಾಯ್ಕನವರ, ನಾಸೀರ್ ಖಾಜಿ, ಸುರೇಶ ನಿಂಗೋಜಿ, ಮಹೇಶ ಕೊಲ್ಲಾಪೂರ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.