ADVERTISEMENT

ಅಂತ್ಯಸಂಸ್ಕಾರ ವಿಳಂಬ: ಆಕ್ರೋಶ

ಪಿಪಿಇ ಕಿಟ್‌ ಧರಿಸದೇ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಪುತ್ರ!

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 5:10 IST
Last Updated 29 ಏಪ್ರಿಲ್ 2021, 5:10 IST
ಮಲಗುಂದ ಗ್ರಾಮದ ಸ್ಮಶಾನಕ್ಕೆ ಆಂಬುಲೆನ್ಸ್‌ನಲ್ಲಿ ಮೃತದೇಹ ತರಲಾಗಿತ್ತು
ಮಲಗುಂದ ಗ್ರಾಮದ ಸ್ಮಶಾನಕ್ಕೆ ಆಂಬುಲೆನ್ಸ್‌ನಲ್ಲಿ ಮೃತದೇಹ ತರಲಾಗಿತ್ತು   

ಅಕ್ಕಿಆಲೂರ: ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ 50 ವರ್ಷದ ಮಹಿಳೆಯ ಅಂತ್ಯಕ್ರಿಯೆ ವಿಳಂಬವಾಗಿದೆ. ಆಂಬುಲೆನ್ಸ್‌ನಲ್ಲಿ ಮೂರು ಗಂಟೆಗಳ ಕಾಲ ಮಹಿಳೆಯ ಮೃತದೇಹ ಇಟ್ಟು ಕಾಯ್ದ ಘಟನೆ ಹಾನಗಲ್ ತಾಲ್ಲೂಕಿನ ಮಲಗುಂದ ಗ್ರಾಮದಲ್ಲಿ
ನಡೆದಿದೆ.

ಗ್ರಾಮದ 50 ವರ್ಷದ ಮಹಿಳೆಯೊಬ್ಬರು ಜ್ವರದಿಂದ ಬಳಲುತ್ತಿದ್ದ ಕಾರಣ ಹಾವೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ರಾತ್ರಿವರೆಗೂ ಆರೋಗ್ಯವಾಗಿದ್ದ ಅವರು ಮಧ್ಯರಾತ್ರಿ ಉಸಿರಾಟದ ತೊಂದರೆಯಿಂದ ಮೃತಪಟ್ಟರು. ಬಳಿಕ ಪರೀಕ್ಷೆಯಲ್ಲಿ ಕೋವಿಡ್‌ ದೃಢಪಟ್ಟಿತ್ತು.

ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಗ್ರಾಮದ ಸ್ಮಶಾನಕ್ಕೆ ಜಿಲ್ಲಾಸ್ಪತ್ರೆಯಿಂದ ಆಂಬುಲೆನ್ಸ್‌ನಲ್ಲಿ ಮೃತದೇಹ ತರಲಾಗಿದೆ. ಅಷ್ಟು ಹೊತ್ತಿಗೆ ಸ್ಥಳದಲ್ಲಿ ಸಂಬಂಧಿಗಳು, ಗ್ರಾ.ಪಂ ಸದಸ್ಯರು, ಗ್ರಾಮಸ್ಥರು ನೆರೆದಿದ್ದರೂ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ಅಂತ್ಯಕ್ರಿಯೆ ನೆರವೇರಿಸಲು ಸಾಧ್ಯವಾಗಿಲ್ಲ. ಮೂರ್ನಾಲ್ಕು ಗಂಟೆಗಳ ಬಳಿಕ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿ ಅಂತ್ಯಕ್ರಿಯೆ
ನೆರವೇರಿಸಿದ್ದಾರೆ.

ADVERTISEMENT

ಈ ಸಂದರ್ಭದಲ್ಲಿ ಪಿಪಿಇ ಕಿಟ್ ಧರಿಸದ ಮೃತ ಮಹಿಳೆಯ ಪುತ್ರನಿಂದ ಚಿತೆಗೆ ಅಗ್ನಿಸ್ಪರ್ಶ ಮಾಡಿಸಿ ಇಲಾಖೆ ಎಡವಟ್ಟು ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.

‘ಜಿಲ್ಲಾಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡಲಾಗಿಲ್ಲ. ಮೊದಲು ಕೊರೊನಾ ಸೋಂಕು ಇಲ್ಲ ಎನ್ನುವ ವರದಿ ಬಂದಿದೆ. ಮಹಿಳೆ ಸತ್ತ ಬಳಿಕ ಕೋವಿಡ್‌ ಇದೆ ಎನ್ನುವ ವರದಿ ಬಂದಿದೆ. ಸಕಾಲದಲ್ಲಿ ಚಿಕಿತ್ಸೆ ನೀಡಿದ್ದರೆ ಮಹಿಳೆ ಬದುಕುಳಿಯುತ್ತಿದ್ದಳು. ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾಳೆ’ ಎಂದು ಸ್ಥಳದಲ್ಲಿ ನೆರೆದಿದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲಾಸ್ಪತ್ರೆಯಿಂದ ಮಾಹಿತಿ ಬಂದಿತ್ತು. ಸ್ಥಳೀಯ ಪಿಡಿಒ ಅವರಿಗೆ ಮಾಹಿತಿ ನೀಡಲಾಗಿತ್ತು. ಆರೋಗ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಲಿಂಗರಾಜ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.