ADVERTISEMENT

ಗಣೇಶೋತ್ಸವ: ಅದ್ಧೂರಿ ಮೆರವಣಿಗೆ

ಬಂಕಾಪುರ: ಪೊಲೀಸ್ ಬಂದೋಬಸ್ತ್‌ನಲ್ಲಿ ಗಣೇಶ ಮೂರ್ತಿ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 15:25 IST
Last Updated 21 ಸೆಪ್ಟೆಂಬರ್ 2022, 15:25 IST
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಬುಧವಾರ ಗಣೇಶ ವಿಸರ್ಜನೆ ಶೋಭಾಯಾತ್ರೆಗೆ ಎಸ್ಪಿ ಹುಮಂತರಾಯ್ ಚಾಲನೆ ನೀಡಿದರು
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಬುಧವಾರ ಗಣೇಶ ವಿಸರ್ಜನೆ ಶೋಭಾಯಾತ್ರೆಗೆ ಎಸ್ಪಿ ಹುಮಂತರಾಯ್ ಚಾಲನೆ ನೀಡಿದರು   

ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದ ನೆಹರೂ ಗಾರ್ಡನ್‌ನಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಸಭಾ ಗಣೇಶ ಮೂರ್ತಿ ವಿಸರ್ಜನೆ ಬುಧವಾರ ಅನೇಕ ಭಕ್ತಸಮೂಹದ ನಡುವೆ ಸಂಭ್ರಮದಿಂದ ಜರುಗಿತು.

ಎಂಟು ವರ್ಷಗಳ ಹಿಂದೆ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆ ಮಾರ್ಗಸೂಚಿ ವಿಷಯವಾಗಿ ಪೊಲೀಸ್ ಅಧಿಕಾರಿಗಳ ಮತ್ತು ಗಣೇಶ ಸಮಿತಿ ಸದಸ್ಯರ ನಡುವೆ ನಡೆದ ವಾಗ್ವಾದದಿಂದ 11ದಿನಕ್ಕೆ ವಿಸರ್ಜನೆ ಮಾಡಬೇಕಾದ ಗಣೇಶನ ಮೂರ್ತಿಯನ್ನು ಮರುಪ್ರತಿಷ್ಠಾಪಿಸಿ 21ದಿನಕ್ಕೆ ವಿಸರ್ಜನೆ ಮಾಡಬೇಕಾಯಿತು. ಅಂದಿನಿಂದ ಪ್ರತಿ ವರ್ಷ 21ದಿನಕ್ಕೆ ವಿಸರ್ಜನೆ ಮೆರವಣಿಗೆ ವಾಡಿಕೆಯಾಗಿ ಸಾಗಿ ಬಂದಿದೆ.

ಜಿಲ್ಲಾ ಎಪಿ ಹನುಮಂತರಾಯ್ ಚಾಲನೆ ನೀಡಿ ಮಾತನಾಡಿ, ಗಣೇಶ ಮೂರ್ತಿ ವಿಸರ್ಜನೆ ಶಾಂತಿಯ ಸಂಕೇತವಾಗಿದ್ದು, ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದರಿಂದ ಸರ್ವರಲ್ಲಿ ಸಮಾನತೆ, ಒಗ್ಗಟ್ಟು ಸಾಧ್ಯ ಎಂದರು.

ADVERTISEMENT

ಅರಳೆಲೆಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಕೆಂಡದಮಠದ ಸಿದ್ದಯ್ಯ ಸ್ವಾಮೀಜಿ, ರೇವಣಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮುಖ್ಯಮಂತ್ರಿ ಆಪ್ತರಾದ ಚನ್ನು ಪಾಟೀಲ, ಮಂಜುನಾಥ ಉಡಪಿ, ಜಿಲ್ಲಾ ಆರ್‌ಎಸ್‌ಎಸ್ ಸಂಚಾಲಕ ಗಂಗಾಧರ ಮಾಮ್ಲೆಶೆಟ್ಟರ, ರಾಜ್ಯ ಬಿಜೆಪಿ ಯುವ ಮೋರ್ಚಾ ಘಟಕದ ಸದಸ್ಯ ನರಹರಿ ಕಟ್ಟಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಶಿವಾನಂಧ ಮ್ಯಾಗೇರಿ, ಬಿಜೆಪಿ ಮುಖಂಡ ಸೋಮಶೇಖರಯ್ಯ ಗೌರಿಮಠ, ಹೊನ್ನಪ್ಪ ಹುಗಾರ, ಗುಡ್ಡಪ್ಪ ಜಲದಿ, ಎಂ.ಎಸ್.ಹೊನ್ನಕೇರಿ, ಬಸವರಾಜ ನಾರಾಯಣಪುರ, ಉಪತಹಶೀಲ್ದಾರ್ ವೆಂಕಟೇಶ ಕುಲಕರ್ಣಿ, ಕಂದಾಯ ನಿರೀಕ್ಷಕ ರಾಕೇಶ್ ಸಮಿತಿ ಅಧ್ಯಕ್ಷ ಈರಣ್ಣ ಬಳಿಗಾರ ಗಣೇಶ ಮೂರ್ತಿಗೆ ಹೂ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು

ಗಣೇಶ ಮೂರ್ತಿ ಮೆರವಣಿಗೆ ಸ್ವಾಗತಕ್ಕಾಗಿ ಇಡೀ ಪಟ್ಟಣದ ಪ್ರತಿ ಓಣಿಗಳಲ್ಲಿನ ಮನೆ, ಮನೆಗಳ ಅಂಗಳದಲ್ಲಿ ಬಣ್ಣ, ಬಣ್ಣದ ರಂಗೋಲಿ ಹಾಕಲಾಗಿತ್ತು, ಮಾವಿನ ತಳಿರು ತೋರಣ ಹಾಗೂ ಕೇಸರಿ ಬಣ್ಣದ ದ್ವಜಗಳು, ತೋರಣಗಳು ರಾರಾಜಿಸುತ್ತಿದ್ದವು.

ಡಿಜೆ ಹಾಡಿಗೆ ಹೆಜ್ಜೆ ಹಾಕಿದರು. ನಂತರ ಗಣೇಶ ಮೂರ್ತಿ ಮೆರವಣಿಗೆ ಬಸ್ ನಿಲ್ದಾಣ, ಸಿಂಪಿಗಲ್ಲಿ, ಪೇಟೆ ಮುಖ್ಯರಸ್ತೆ, ನಾಡಕಚೇರಿ ರಸ್ತೆ, ರೇಣುಕಾ ಟಾಕೀಜ್, ಕೊಟ್ಟಿಗೇರಿ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ಸಂಚರಿಸಿತು. ಹಿಂದು ಮಹಾಸಭಾ ಗಣೇಶ ಸಮಿತಿ ಸದಸ್ಯರು, ಸುತ್ತಲಿನ ಗ್ರಾಮಗಳ ಭಕ್ತ ಸಮೂಹ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.