ಹಾವೇರಿ: ಜಿಲ್ಲೆಯ ದೇವಿಹೊಸೂರಿನ ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ಕರುಣಾ ಅಪ್ಪುಗೋಳ ಮತ್ತು ಅರುಣಾ ಎಸ್.ಟಿ. ಅವರು ನಾಲ್ಕು ವರ್ಷಗಳ ಬಿ ಟೆಕ್. (ಆಹಾರ ತಂತ್ರಜ್ಞಾನ) ಪದವಿಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯ ಕೊಡಮಾಡುವ ಚಿನ್ನದ ಪದಕವನ್ನು ಜಂಟಿಯಾಗಿ ಪಡೆದುಕೊಂಡಿದ್ದಾರೆ.
ಕರುಣಾ ಅಪ್ಪುಗೋಳ ಅವರು ತನ್ನ ಪದವಿಯ ಅವಧಿಯಲ್ಲಿ ಅತ್ಯುತ್ತಮ ವಿದ್ಯಾರ್ಥಿನಿಯಾಗಿ ಆಯ್ಕೆಗೊಂಡು ದೇವಿಹೊಸೂರು ಆವರಣದ ಶಿಕ್ಷಕ ಮತ್ತು ಶಿಕ್ಷಕೇತರರ ಹೆಸರಿನಲ್ಲಿರುವ ಚಿನ್ನದ ಪದಕ ಹಾಗೂ ಬೆಂಗಳೂರಿನ ಮೆ.ಇಂಡಸ್ ಮತ್ತು ಬರ್ಫಿ ಕಂಪನಿಯವರು ಕೊಡಮಾಡುವ ದಿ.ಸೀತಾ ಭಟ್ ಸ್ಮಾರಕ ಚಿನ್ನದ ಪದಕಗಳೊಂದಿಗೆ ಒಟ್ಟು ಮೂರು ಪದಕಗಳನ್ನುಗಳಿಸಿ ಈ ಮಹಾವಿದ್ಯಾಲಯದ ಮೊದಲ ತಂಡದ ಚಿನ್ನದ ಬೆಡಗಿಯಾಗಿ ಹೊರಹೊಮ್ಮಿದ್ದಾರೆ.
ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯಲ್ಲಿ ಇತ್ತೀಚೆಗೆ ಜರುಗಿದ 10ನೇ ಘಟಿಕೋತ್ಸವ ಸಮಾರಂಭದಲ್ಲಿ ಚಿನ್ನದ ಪದಕ ನೀಡಲಾಗಿದೆ. ಕರುಣಾ ಪ್ರಸ್ತುತ ತಮಿಳುನಾಡಿನ ತಂಜಾವೂರಿನಲ್ಲಿರುವ ಭಾರತೀಯ ಆಹಾರ ಸಂಸ್ಕರಣಾ ಸಂಸ್ಥೆಯಲ್ಲಿ ಸ್ನಾತ್ತಕೋತ್ತರ ಪದವಿಯನ್ನು ಅಭ್ಯಸಿಸುತ್ತಿದ್ದಾರೆ.
ಅರುಣಾಎಸ್.ಟಿ. ಅವರು ರಾಷ್ಟ್ರೀಯ ಮಟ್ಟದ ಅರ್ಹತಾ ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ರ್ಯಾಂಕ್ ಪಡೆದು, ಹರಿಯಾಣದ ಕರ್ನಾಲ್ನಲ್ಲಿರುವ ರಾಷ್ಟ್ರೀಯ ಡೇರಿ ಸಂಶೋಧನಾ ಸಂಸ್ಥೆಯಲ್ಲಿ ಉನ್ನತ ವ್ಯಾಸಂಗವನ್ನು ಮುಂದುವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.