ಹಾನಗಲ್: ತಗ್ಗು, ಗುಂಡಿಗಳು ಸೃಷ್ಟಿಯಾಗಿ ಸಂಚಾರಕ್ಕೆ ಸಂಚಕಾರ ತಂದಿದ್ದ ಹಾನಗಲ್ನಿಂದ ಬಂಕಾಪುರ ಹೋಗುವ ರಸ್ತೆಯ ದುರಸ್ತಿ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಕೈಗೊಂಡಿದೆ.
ಈ ರಸ್ತೆಯಲ್ಲಿ ಉಂಟಾಗಿದ್ದ ಬೃಹತ್ ಗಾತ್ರದ ಗುಂಡಿಗಳು ವಾಹನ ಸವಾರರನ್ನು ಫಜೀತಿಗೆ ಸಿಲುಕಿಸುತ್ತಿದ್ದವು. ಈ ರಸ್ತೆಯಲ್ಲಿ ನಿರಂತರವಾಗಿ ಸಂಚರಿಸುವ ಸ್ಥಳೀಯ ಜನರಿಗೆ ಇಲ್ಲಿನ ಅಧ್ವಾನ ಗೊತ್ತಿದ್ದ ಕಾರಣಕ್ಕೆ ಎಚ್ಚರಿಕೆ ವಹಿಸುತ್ತಿದ್ದರು. ಆದರೆ ಬೇರೆ ಊರುಗಳ ವಾಹನ ಸವಾರರು ಇಲ್ಲಿನ ಅಪಾಯವನ್ನು ಲೆಕ್ಕಿಸದೇ ಅನಾಹುತ ಮಾಡಿಕೊಳ್ಳುತ್ತಿದ್ದರು.
ರಸ್ತೆ ನಿರ್ವಹಣೆಯ ವೈಫಲ್ಯ ಸಾರ್ವಜನಿಕವಾಗಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಈ ರಸ್ತೆಯಲ್ಲಿನ ಅಪಘಾತಗಳ ಬಗ್ಗೆ ಪತ್ರಿಕೆ ವರದಿ ಪ್ರಕಟಿಸಿತ್ತು. ಶುಕ್ರವಾರದಿಂದ ರಸ್ತೆಯಲ್ಲಿನ ತಗ್ಗು, ಗುಂಡಿಗಳನ್ನು ಮುಚ್ಚುವ ಕಾಮಗಾರಿಯನ್ನು ಪಿಡಬ್ಲುಡಿ ಇಲಾಖೆ ಕೈಗೊಂಡಿದ್ದು, ಮಾಸನಕಟ್ಟಿ ಗ್ರಾಮದ ತನಕ ದುರಸ್ತಿ ಕೆಲಸ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪಿಡಬ್ಲುಡಿ ಎಇಇ ನಾಗರಾಜ ಎಸ್., ಸದ್ಯಕ್ಕೆ ಕರಗುದರಿ ಕ್ರಾಸ್ನಿಂದ ಬೆಳಗಾಲಪೇಟೆ ಕ್ರಾಸ್ ತನಕ ರಸ್ತೆಯಲ್ಲಿನ ಗುಂಡಿಗಳಿಗೆ ಖಡಿ ಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ. ತಾಲ್ಲೂಕು ಗಡಿ ತನಕ ದುರಸ್ತಿ ಕಾಮಗಾರಿ ಮುಂದುವರಿಯುತ್ತದೆ. ಸದ್ಯದಲ್ಲಿಯೇ ಈ ರಸ್ತೆಯ ದುರಸ್ತಿ ಮತ್ತು ನಿರ್ವಹಣೆಗಾಗಿ ಒಂದು ವರ್ಷದ ಅವಧಿಗೆ ಟೆಂಡರ್ ಕರೆದು ಗುತ್ತಿಗೆದಾರರನ್ನು ನೇಮಕ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.