ಹಾನಗಲ್: ತಾಲ್ಲೂಕಿನ ರೈತರು, ಕೃಷಿ ಬೆಳೆ ಹಾನಿ ಆದ ಬಗ್ಗೆ ಮಾಹಿತಿ ನೀಡಲು ಆ.14 ರ ವರೆಗೆ ಅವಕಾಶ ನೀಡಲಾಗಿದೆ. ಉತಾರ, ಆಧಾರ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಝರಾಕ್ಸನೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ತಹಶೀಲ್ದಾರ್ ರೇಣುಕಾ ಎಸ್. ಹೇಳಿದರು.
ಸೋಮವಾರ ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ರೈತ ಸಂಘದ ಪ್ರಮುಖರು ಮತ್ತು ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬೆಳೆ ಹಾನಿಯಾಗುವಂತಹ ಮಳೆ ಬಂದಿರುವುದರಿಂದ ರೈತರು ಪರಿಹಾರಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಬೆಳೆ ಹಾನಿ ಪರಿಶೀಲನೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಬೆಳೆಹಾನಿಯ ಬಗ್ಗೆ ಅಗತ್ಯದ ದಾಖಲೆಗಳ ಸಮೇತ ನಿಗದಿತ ಅವಧಿಯೊಳಗೆ ಸಂಬಂಧಿಸಿದ ಹೋಬಳಿಗಳಲ್ಲಿ ಅರ್ಜಿ ಸಲ್ಲಿಸಬೇಕು. ನಂತರ ಕೃಷಿ ಇಲಾಖೆ ಪರಿಶೀಲಿಸಿ ಬೆಳೆ ಹಾನಿ ಪರಿಹಾರಕ್ಕೆ ಸರ್ಕಾರಕ್ಕೆ ಮಾಹಿತಿ ನೀಡಲಿದೆ ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಮಾರುತಿ ಅಂಗರಗಟ್ಟಿ, ಜುಲೈ 31 ರ ವರೆಗೆ ಬಿತ್ತನೆ ಅವಕಾಶವಿತ್ತು. ಹೀಗಾಗಿ ಬೆಳೆ ಹಾನಿ ಪರಿಶೀಲನೆಗೆ ತಾಂತ್ರಿಕ ಅಡಚಣೆ ಇತ್ತು. ಈಗ ಸರ್ವೆ ಕಾರ್ಯಕ್ಕೆ ಮುಂದಾಗುತ್ತೇವೆ. ಬೆಳೆ ಹಾನಿಯಾದ ರೈತರು ಬಮ್ಮನಹಳ್ಳಿ, ಅಕ್ಕಿಆಲೂರು, ಹಾನಗಲ್ ಹೋಬಳಿಯಲ್ಲಿ ತಮಗೆ ಸಂಬಂಧಿಸಿದ ಹೋಬಳಿಯಲ್ಲೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಅವಧಿ ಮುಗಿದ ತಕ್ಷಣ ವಿಳಂಬವಿಲ್ಲದೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ರೈತ ಮುಖಂಡರಾದ ಅಡವೆಪ್ಪ ಆಲದಕಟ್ಟಿ, ಮಲ್ಲೇಶಪ್ಪ ಪರಪ್ಪನವರ, ಸೋಮಣ್ಣ ಜಡೆಗೊಂಡರ, ರುದ್ರಪ್ಪ ಹಣ್ಣಿ, ಶ್ರೀಕಾಂತ ದುಂಡಣ್ಣನವರ, ಮಹಲಿಂಗಪ್ಪ ಅಕ್ಕಿವಳ್ಳಿ, ಶ್ರೀಧರ ಮಲಗುಂದ, ಮಹೇಶ ಕೊಂಡೋಜಿ, ರಾಜೀವ ದಾನಪ್ಪನವರ, ಗಿರೀಶ ಹಿರೇಮಠ, ಅಜ್ಜನಗೌಡ ಕರೇಗೌಡ್ರ, ರಾಜೇಂದ್ರಪ್ಪ ಗಾಳಪೂಜಿ, ಶಿವನಗೌಡ ಉದ್ದೇಗೌಡ್ರ, ರಮೇಶ ಕಳಸೂರ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಾದ ಸಂಗಮೇಶ ಹಕ್ಲಪ್ಪನವರ, ಎಚ್,ಸಂತೋಷ, ಕಂದಾಯ ಇಲಾಖೆ ಶಿರಸ್ತೆದಾರ ಕೆ.ಟಿ.ಕಾಂಬಳೆ, ತೋಟಗಾರಿಕೆ ಇಲಾಖೆ ಅಧಿಕಾರಿ ಭರಮಪ್ಪ ನೇಗಿನಹಾಳ ಪಾಲ್ಗೊಂಡಿದ್ದರು.
ಯೂರಿಯಾ ಕೊರತೆ
ತಾಲ್ಲೂಕಿನಲ್ಲಿ ಯೂರಿಯಾ ಕೊರತೆ ಇದೆ. ರಾಜ್ಯ ಜಿಲ್ಲೆಯನ್ನು ಹೋಲಿಸಿದರೆ ಹಾನಗಲ್ ತಾಲ್ಲೂಕಿಗೆ ಅತಿ ಕಡಿಮೆ ಯೂರಿಯಾ ಪೂರೈಕೆಯಾಗಿರುವುದು ಕವಳಕಾರಿ ಸಂಗತಿ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಸಭೆಯ ಗಮನಕ್ಕೆ ತಂದರು. ಕಳೆದ ವರ್ಷದ ಬೆಳೆವಿಮೆ ಬಾಕಿ ಇದೆ. ಬೆಳೆ ಮಿಸ್ಮ್ಯಾಚ್ ಸಮಸ್ಯೆಗಳು ಇವೆ. ಈ ಸಮಸ್ಯೆಗಳನ್ನು ಅಧಿಕಾರಿಗಳು ಸರಿಪಡಿಸುವ ಕೆಲಸ ಮಾಡಬೇಕು. ಸರ್ಕಾರ ಕೇವಲ ಪರಿಶಿಷ್ಟ ವರ್ಗಕ್ಕೆ ಮಾತ್ರ ಸೀಮಿತಪಡಿಸಿದ ಹನಿ ನೀರಾವರಿ ಸ್ಪ್ರಿಂಕ್ಲರ್ ಸಹಾಯಧನವನ್ನು ಎಲ್ಲ ವರ್ಗದ ರೈತರಿಗೆ ಎಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ ಹಿಂದಿನ ವರ್ಷಗಳ ಸಹಾಯಧನದ ಅನುದಾನ ಇನ್ನೂ ಬಿಡಗಡೆಯಾಗಿಲ್ಲ. ಕೇವಲ ಘೋಷಣೆ ಸಾಲದು. ಸರ್ಕಾರ ಅನುದಾನ ನೀಡಿ ರೈತರ ಸಹಾಯಕ್ಕೆ ನಿಲ್ಲಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.