ADVERTISEMENT

ಹಾವೇರಿ: ಲೋಕಾಯುಕ್ತ ಪೊಲೀಸರ ದಿಕ್ಕು ತಪ್ಪಿಸಲು ಲಂಚದ ಹಣ ಬಚ್ಚಿಟ್ಟಿದ್ದ ಎಸ್‌ಡಿಎ!

ಹಾನಗಲ್ ತಹಶೀಲ್ದಾರ್ ಕಚೇರಿ ಶಿರಸ್ತೆದಾರ, ಇಬ್ಬರು ಎಸ್‌ಡಿಎ ಬಂಧನ

ಸಂತೋಷ ಜಿಗಳಿಕೊಪ್ಪ
Published 19 ಅಕ್ಟೋಬರ್ 2025, 7:20 IST
Last Updated 19 ಅಕ್ಟೋಬರ್ 2025, 7:20 IST
<div class="paragraphs"><p>ಕರ್ನಾಟಕ ಲೋಕಾಯುಕ್ತ</p></div>

ಕರ್ನಾಟಕ ಲೋಕಾಯುಕ್ತ

   

ಹಾವೇರಿ: ಜಿಲ್ಲೆಯ ಹಾನಗಲ್ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ಕಾರ್ಯಾಚರಣೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಕಚೇರಿಯ ಶಿರಸ್ತೆದಾರ–ಇಬ್ಬರು ಎಸ್‌ಡಿಎಗಳನ್ನು ಬಲೆಗೆ ಕೆಡವಿದ್ದಾರೆ. ಕಾರ್ಯಾಚರಣೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿಗಳು, ₹ 12 ಸಾವಿರ ಲಂಚದ ಹಣವನ್ನು ಬಚ್ಚಿಟ್ಟು ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿ ಕೊನೆಗೆ ಸಿಕ್ಕಿಬಿದ್ದಿದ್ದಾರೆ.

‘ಹಾನಗಲ್ ತಹಶೀಲ್ದಾರ್ ಕಚೇರಿಯ ಶಿರಸ್ತೆದಾರ ತಮ್ಮಣ್ಣ ಕಾಂಬಳೆ, ದ್ವಿತೀಯ ದರ್ಜೆ ಸಹಾಯಕರಾದ ಗೂಳಪ್ಪ ಮನಗೂಳಿ ಹಾಗೂ ಶಿವಾನಂದ ಬಡಿಗೇರ ಅವರನ್ನು ಬಂಧಿಸಲಾಗಿದೆ. ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದರು.

ADVERTISEMENT

‘ತಮ್ಮಣ್ಣ ಹಾಗೂ ಗೂಳಪ್ಪ, ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ. ಶಿವಾನಂದ, ಲಂಚದ ಹಣವನ್ನು ಬಚ್ಚಿಟ್ಟು ಆರೋಪಿಗಳ ಕೃತ್ಯಕ್ಕೆ ಸಹಕರಿಸಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪಿಯಾಗಿದ್ದಾರೆ. ಮೂವರ ವಿರುದ್ಧವೂ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

ಕಿಟಕಿ ಹೊರಭಾಗದಲ್ಲಿ ಬಚ್ಚಿಟ್ಟಿದ್ದ ಹಣ: ‘ದೂರುದಾರರಾದ ಬೊಮ್ಮನಹಳ್ಳಿ ಗ್ರಾಮದ ನವೀನ ಬಸನಗೌಡ ಪಾಟೀಲ ಅವರ ಪರಿಚಯಸ್ಥ ಶಂಕ್ರಪ್ಪ ಈರಪ್ಪ ಗುಮಗುಂಡಿ ಅವರು ಕೆ.ಡಿ.ಟಿ. ಪ್ರಕಾರ ಆರ್‌.ಟಿ.ಸಿ ದುರಸ್ತಿ ಮಾಡಿಕೊಡಲು ಹಾನಗಲ್ ತಹಶೀಲ್ದಾರ್ ಕಚೇರಿಗೆ ಜನವರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅಸಮರ್ಪಕ ದಾಖಲೆ ನೆಪವೊಡ್ಡುತ್ತಿದ್ದ ಶಿರಸ್ತೆದಾರ ಹಾಗೂ ಎಸ್‌ಡಿಎ, ದುರಸ್ತಿ ಮಾಡಿಕೊಡಲು ಹಿಂದೇಟು ಹಾಕುತ್ತಿದ್ದರು’ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.

‘ಕೆಲಸ ಮಾಡಿಕೊಡಲು ಆರೋಪಿಗಳು, ₹ 12 ಸಾವಿರಕ್ಕೆ ಬೇಡಿಕೆ ಇರಿಸಿದ್ದರು. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಶಂಕ್ರಪ್ಪ, ಲಂಚ ನೀಡಲು ಆಗುವುದಿಲ್ಲವೆಂದು ಹೇಳಿದ್ದರು. ಅಷ್ಟಾದರೂ ಆರೋಪಿಗಳು, ಲಂಚ ನೀಡುವಂತೆ ಪುನಃ ಬೇಡಿಕೆ ಇರಿಸಿದ್ದರು. ಬೇಸತ್ತ ಶಂಕ್ರಪ್ಪ ಅವರ ಪರವಾಗಿ ನವೀನ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಯಿತು’ ಎಂದು ಹೇಳಿವೆ.

‘ಹಾನಗಲ್ ತಹಶೀಲ್ದಾರ್ ಕಚೇರಿಗೆ ಶನಿವಾರ ಹೋಗಿದ್ದ ಅರ್ಜಿದಾರ, ಎಸ್‌ಡಿಎ ಶಿವಾನಂದ ಬಡಿಗೇರ ಕೊಠಡಿಯಲ್ಲಿ ಶಿರಸ್ತೆದಾರ ತಮ್ಮಣ್ಣನನ್ನು ಭೇಟಿಯಾಗಿ ₹ 12 ಸಾವಿರ ಲಂಚದ ಹಣ ನೀಡಿದ್ದರು. ಅದೇ ಕೊಠಡಿಯಲ್ಲಿದ್ದ ಡಬ್ಬಿಯಲ್ಲಿ ಹಣ ಇರಿಸಿದ್ದ ತಮ್ಮಣ್ಣ, ನಂತರ ಪಕ್ಕದಲ್ಲಿದ್ದ ತಮ್ಮ ಕೊಠಡಿಗೆ ಹೋಗಿ ಕುಳಿತುಕೊಂಡಿದ್ದರು. ಕಚೇರಿಯಿಂದ ಹೊರಬಂದಿದ್ದ ಅರ್ಜಿದಾರ, ಹಣ ಕೊಟ್ಟ ಮಾಹಿತಿ ತಿಳಿಸಿದ್ದರು. ಬಳಿಕ, ತಂಡದ ಮೂಲಕ ನೇರವಾಗಿ ಶಿರಸ್ತೆದಾರನ ಕೊಠಡಿಗೆ ಹೋಗಿ ಪರಿಶೀಲನೆ ಮಾಡಿದೆವು.’

‘ಶಿರಸ್ತೆದಾರನ ಬಳಿ ಹಣ ಇರಲಿಲ್ಲ. ಹಣಕ್ಕಾಗಿ ಹುಡುಕಾಟ ಆರಂಭಿಸಿದ್ದೆವು. ಪಕ್ಕದ ಕೊಠಡಿಯಲ್ಲಿದ್ದ ಎಸ್‌ಡಿಎ ಶಿವಾನಂದನಿಗೆ ದಾಳಿ ಮಾಹಿತಿ ಗೊತ್ತಾಗಿತ್ತು. ಆತ, ಡಬ್ಬಿಯಲ್ಲಿದ್ದ ಹಣವನ್ನು ಹೊರಗೆ ತೆಗೆದು ಕಿಟಕಿಯ ಹೊರಭಾಗದಲ್ಲಿ ಬಚ್ಚಿಟ್ಟಿದ್ದ. ಶಿರಸ್ತೆದಾರ ನೀಡಿದ್ದ ಮಾಹಿತಿ ಆಧರಿಸಿ ಶಿವಾನಂದನ ಕೊಠಡಿಗೆ ಹೋದಾಗ, ಹಣವಿಲ್ಲವೆಂದು ವಾದಿಸಿದ. ಬಳಿಕ ಕೊಠಡಿಯ ಎಲ್ಲ ಕಡೆ ಹುಡುಕಾಟ ನಡೆಸಲಾಯಿತು. ಅವಾಗಲೇ ಕಿಟಕಿಯ ಹೊರಭಾಗದಲ್ಲಿ ಹಣ ಸಿಕ್ಕಿತು’ ಎಂದು ಮೂಲಗಳು ತಿಳಿಸಿವೆ.

ಹುಬ್ಬಳ್ಳಿಯಿಂದ ವರ್ಗಾವಣೆ: ‘ತಮ್ಮಣ್ಣ ಈ ಹಿಂದೆ ಹುಬ್ಬಳ್ಳಿಯಲ್ಲಿದ್ದರು. ಅಲ್ಲಿಂದ ಎರಡು ವರ್ಷಗಳ ಹಿಂದೆಯಷ್ಟೇ ಹಾನಗಲ್ ತಹಶೀಲ್ದಾರ್ ಕಚೇರಿಗೆ ವರ್ಗಾವಣೆಗೊಂಡಿದ್ದರು. ಅರ್ಜಿದಾರರು ಜನವರಿಯಲ್ಲಿ ಅರ್ಜಿ ಕೊಟ್ಟಿದ್ದರು. ಅಕ್ಟೋಬರ್‌ ಬಂದರೂ ಆರೋಪಿ, ಅರ್ಜಿ ವಿಲೇವಾರಿ ಮಾಡಿರಲಿಲ್ಲ’ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ಹೇಳಿವೆ.

‘ತಮ್ಮಣ್ಣನ ವಿರುದ್ಧ ಈಗ ಒಬ್ಬರು ಮಾತ್ರ ದೂರು ನೀಡಿದ್ದಾರೆ. ಈತನಿಂದ ಯಾರಿಗಾದರೂ ಸಮಸ್ಯೆಯಾಗಿದ್ದರೆ, ಸರ್ಕಾರಿ ಕೆಲಸಕ್ಕೆ ಲಂಚ ಪಡೆದಿದ್ದರೆ ದೂರು ನೀಡಬಹುದು’ ಎಂದು ಮೂಲಗಳು ಕೋರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.