ADVERTISEMENT

‘ಹಾಲು ವಿತರಣೆ: ಪ್ರಚಾರಕ್ಕೆ ಬಳಕೆ’

ಬಡವರು, ರೈತರ ಸಂಕಷ್ಟಕ್ಕೆ ಸ್ಪಂದಿಸಿ: ಕಾಂಗ್ರೆಸ್‌ ಮುಖಂಡರ ಮನವಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 13:40 IST
Last Updated 7 ಏಪ್ರಿಲ್ 2020, 13:40 IST
ಸಂಕಷ್ಟದಲ್ಲಿರುವ ಬಡಜನರು ಮತ್ತು ರೈತರ ನೆರವಿಗೆ ಕೂಡಲೇ ಧಾವಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಘಟಕದಿಂದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು 
ಸಂಕಷ್ಟದಲ್ಲಿರುವ ಬಡಜನರು ಮತ್ತು ರೈತರ ನೆರವಿಗೆ ಕೂಡಲೇ ಧಾವಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಘಟಕದಿಂದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು    

ಹಾವೇರಿ: ಸಂಕಷ್ಟದಲ್ಲಿರುವ ಜನರು ಹಾಗೂ ರೈತರ ನೆರವಿಗೆ ಜಿಲ್ಲಾಡಳಿತ ಧಾವಿಸುವಂತೆ ಜಿಲ್ಲಾ ಹಾವೇರಿ ಜಿಲ್ಲಾ ಕಾಂಗ್ರೆಸ್‌ನ ಟಾಸ್ಕ್ ಫೋರ್ಸ್ ಸಮಿತಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿತು.

ಹಾವೇರಿ ಜಿಲ್ಲಾ ಕಾಂಗ್ರೆಸ್‌ನ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷ ರುದ್ರಪ್ಪ ಲಮಾಣಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರನ್ನು ಭೇಟಿಯಾದ ಕಾಂಗ್ರೆಸ್ ಮುಖಂಡರು, ಸರ್ಕಾರ ಬಡ ಕುಟುಂಬಗಳಿಗೆ ಹಾಲು ವಿತರಣೆ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಹಾಲು ವಿತರಣೆ ಆಡಳಿತ ಪಕ್ಷದ ಪ್ರಚಾರಕ್ಕೆ ಬಳಕೆಯಾಗುತ್ತಿದೆ. ಜೊತೆಗೆ ಒಂದು ಪಕ್ಷದ ಕಾರ್ಯಕರ್ತರಿಗೆ ಹಾಲನ್ನು ನೀಡಲಾಗುತ್ತಿದ್ದು, ಸಮರ್ಪಕವಾಗಿ ಬಡವರಿಗೆ ಹಾಲು ವಿತರಣೆಯಾಗುತ್ತಿಲ್ಲ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

ಸರ್ಕಾರ ಪೂರೈಸುವ ಹಾಲು ಅರ್ಹ ಬಡ ಕುಟುಂಬದ ಫಲಾನುಭವಿಗಳಿಗೆ ತಲುಪಬೇಕು. ವಲಸೆ ಕಾರ್ಮಿಕರಿಗೆ ಅಲೆಮಾರಿ ಕಾರ್ಮಿಕರಿಗೆ, ಅಸಂಘಟಿತ ಕಾರ್ಮಿಕರಿಗೆ 2 ತಿಂಗಳ ಅವಶ್ಯಕ ಪಡಿತರ ಆಹಾರ ಧಾನ್ಯಗಳನ್ನು ಪೂರೈಸಬೇಕೆಂದು ಒತ್ತಾಯಿಸಿದ್ದಾರೆ.

ADVERTISEMENT

7 ಕೆ.ಜಿ. ಅಕ್ಕಿ ನೀಡಿ:ಈ ಹಿಂದಿನ ಸರ್ಕಾರ ಸಾರ್ವಜನಿಕರಿಗೆ ಪ್ರತಿಯೊಬ್ಬರಿಗೂ 7 ಕೆ.ಜಿ.ಯಂತೆ ಅಕ್ಕಿಯನ್ನು ನೀಡುತ್ತಿತ್ತು. ಈಗಿನ ಸರ್ಕಾರ ಪ್ರತಿಯೊಬ್ಬರಿಗೆ 5 ಕೆ.ಜಿ. ನೀಡುತ್ತಿದ್ದು, ತತ್‌ಕ್ಷಣ ಪ್ರತಿಯೊಬ್ಬರಿಗೂ 7 ಕೆ.ಜಿ.ಯಂತೆ ಅಕ್ಕಿ, 5 ಕೆ.ಜಿ ಗೋಧಿ, 2 ಕೆ.ಜಿ ಅಡುಗೆ ಎಣ್ಣೆ, 2 ಕೆಜಿ ತೊಗರಿಬೇಳೆ ಪೂರೈಸಬೇಕು ಎಂದು ಮನವಿ ಮಾಡಿದ್ದಾರೆ.

ಸರ್ಕಾರಿ ಆಸ್ಪತ್ರೆಗಳನ್ನು ಕೊರೊನಾ ಚಿಕಿತ್ಸೆಗೆ ಮೀಸಲಿಟ್ಟಿರುವುದರಿಂದ, ಇತರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳೂ ಸಹ ತೆರೆದಿಲ್ಲ. ರೋಗಿಗಳು ಎಲ್ಲಿ ಹೋಗಬೇಕು. ಅನೇಕ ರೋಗಿಗಳು ಕಾಯಿಲೆಗಳಿಂದ ನರಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹೊಲದಲ್ಲೇ ಕೊಳೆಯುತ್ತಿರುವ ತರಕಾರಿ:ಕೊರೊನಾ ಲಾಕ್‌ಡೌನ್‌ನಿಂದಾಗಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ರೈತರು ಬೆಳೆದ ಹಸಿಮೆಣಸು, ಹೂವು, ವಿವಿಧ ತರಕಾರಿಗಳು ಹೊಲದಲ್ಲಿಯೇ ಕೊಳೆಯುತ್ತಿವೆ. ರೈತರ ತರಕಾರಿ ಹಾಗೂ ಇತರೆ ಉತ್ಪನ್ನಗಳನ್ನು ಸರ್ಕಾರವು ಎಪಿಎಂಸಿಗಳ ಮೂಲಕ ನೇರವಾಗಿ ಖರೀದಿಸಿ ಸಾರ್ವಜನಿಕರಿಗೆ ಮಾರಾಟದ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಹಿರೇಮಠ, ಮುಖಂಡರಾದ ಎಸ್.ಎಫ್.ಎನ್. ಗಾಜೀಗೌಡ್ರ, ಜಿಲ್ಲಾ ಪಂಚಾಯತಿ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ, ನಗರಸಭಾ ಸದಸ್ಯ ಸಂಜೀವಕುಮಾರ ನೀರಲಗಿ, ಶಿವಜಾತಪ್ಪ ಚನ್ನೂರ, ಬಸವರಾಜ ಬಳ್ಳಾರಿ, ದಾದಾಫೀರ್ ಚೂಡಿಗಾರ, ನಿಂಗರಾಜ ಶಿವಣ್ಣನವರ, ಸತೀಶ ಈಳಗೇರ, ನಾಗರಾಜ ತಳವಾರ, ಗಣೇಶ ಬಿಷ್ಟಣ್ಣನವರ, ಉಳಿವೆಪ್ಪ ಹಲಗಣ್ಣನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.