ADVERTISEMENT

ಹಾವೇರಿ ಪ್ಲಾಸ್ಟಿಕ್‌ ಮುಕ್ತ ನಗರವಾಗಲಿ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

ಮನೆಗಳಿಂದಲೇ ಕಸ ವಿಂಗಡಣೆಗೆ ಕ್ರಮ ಕೈಗೊಳ್ಳಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 15:41 IST
Last Updated 3 ಫೆಬ್ರುವರಿ 2021, 15:41 IST
ಹಾವೇರಿ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ‘ಸ್ವಚ್ಛ ಹಾವೇರಿ-ಸ್ವಸ್ಥ ಹಾವೇರಿ’ ತರಬೇತಿ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಉದ್ಘಾಟಿಸಿದರು. ಹೊಸಮಠದ ಬಸವ ಶಾಂತಲಿಂಗಶ್ರೀ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಪೌರಾಯುಕ್ತ ಪರಶುರಾಮ ಚಲವಾದಿ, ಡಿವೈಎಸ್ಪಿ ವಿಜಯಕುಮಾರ ಸಂತೋಷ ಇದ್ದಾರೆ 
ಹಾವೇರಿ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ‘ಸ್ವಚ್ಛ ಹಾವೇರಿ-ಸ್ವಸ್ಥ ಹಾವೇರಿ’ ತರಬೇತಿ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಉದ್ಘಾಟಿಸಿದರು. ಹೊಸಮಠದ ಬಸವ ಶಾಂತಲಿಂಗಶ್ರೀ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಪೌರಾಯುಕ್ತ ಪರಶುರಾಮ ಚಲವಾದಿ, ಡಿವೈಎಸ್ಪಿ ವಿಜಯಕುಮಾರ ಸಂತೋಷ ಇದ್ದಾರೆ    

ಹಾವೇರಿ: ಕಸ ಸಂಗ್ರಹ, ವಿಲೇವಾರಿ ಮತ್ತು ಮರುಬಳಕೆಯನ್ನು ನಗರ ಸ್ಥಳೀಯ ಸಂಸ್ಥೆಗಳು ವೈಜ್ಞಾನಿಕವಾಗಿ ನಿರ್ವಹಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಹಾವೇರಿ ನಗರವನ್ನು ಪ್ಲಾಸ್ಟಿಕ್‌ ಮುಕ್ತವಾಗಿಸಬೇಕು ಎಂದು ಜಿಲ್ಲಾಧಿಕಾರಿಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಜಿಲ್ಲಾಡಳಿತ ಹಾಗೂ ಹಾವೇರಿ ನಗರಸಭೆ ಸಹಯೋಗದಲ್ಲಿ ಬುಧವಾರ ನಗರದ ಹೊಸಮಠದ ಸಭಾಭವನದಲ್ಲಿ ಹಾವೇರಿ ಮತ್ತು ಗುತ್ತಲ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರಿಗೆ ಘನ ಹಾಗೂ ದ್ರವ ತ್ಯಾಜ್ಯ ನಿರ್ವಹಣೆ ಕುರಿತಂತೆ ‘ಸ್ವಚ್ಛ ಹಾವೇರಿ-ಸ್ವಸ್ಥ ಹಾವೇರಿ’ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಣ ಕಸವನ್ನು ಕಾಂಪೋಸ್ಟ್ ಮಾಡಿ ಗೊಬ್ಬರವಾಗಿಸಿ ಮಾರಾಟ ಮಾಡುವುದರಿಂದ ಸ್ಥಳೀಯ ಸಂಸ್ಥೆಗಳು ಆದಾಯ ಗಳಿಸಬಹುದು. 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಈ ಹೊತ್ತಿನಲ್ಲಿ ಹಾವೇರಿ ನಗರ ಹೇಗಿರಬೇಕು ಎಂಬುದನ್ನು ನಾವು ಅರಿತುಕೊಳ್ಳಬೇಕು. ನಗರ ಸ್ವಚ್ಛತೆಗೆ ಪೌರ ಕಾರ್ಮಿಕರೊಂದಿಗೆ ಜನರು ಸಹಕರಿಸಬೇಕು ಎಂದರು.

ADVERTISEMENT

ನಗರಸಭೆ ಅಧ್ಯಕ್ಷ ಸಂಜೀಕುಮಾರ ನೀರಲಗಿ ಮಾತನಾಡಿ, ಪೌರಕಾರ್ಮಿಕರು ನಗರದ ಆಧಾರಸ್ತಂಭಗಳು ಇದ್ದಂತೆ. ಪ್ರಾಮಾಣಿಕತೆ, ನಿಷ್ಠೆಯಿಂದ ನನ್ನ ಹಾವೇರಿ, ನನ್ನೂರು, ನನ್ನದು ಎಂಬ ಮನೋಭಾವದಿಂದ ಪೌರಕಾರ್ಮಿಕರು ಕೆಲಸ ಮಾಡಬೇಕು. ಈ ಮನೋಭಾವದಿಂದ ನಗರವನ್ನು ಸ್ವಚ್ಛವಾಗಿರಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಅವರು ಕಾರ್ಯಾಗಾರದಲ್ಲಿ ಪೌರಕಾರ್ಮಿಕರಿಗೆ ಘನ ಮತ್ತು ದ್ರವ ತ್ಯಾಜ್ಯದ ನಿರ್ವಹಣೆ, ನಾಗರಿಕರ ಜವಾಬ್ದಾರಿ, ಬಯೋ ಕಾಂಪೋಸ್ಟ್, ಸ್ವಚ್ಛತಾ ಅಧಿನಿಯಮ ಕುರಿತಂತೆ ವಿವರವಾಗಿ ತರಬೇತಿ ನೀಡಿದರು.

ಜಿಲ್ಲಾ ನಗರಾಭಿವೃದ್ಧಿಕೋಶ ಯೋಜನಾ ನಿರ್ದೇಶಕ ವಿರಕ್ತಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭೆ ಉಪಾಧ್ಯಕ್ಷೆ ಜಹೇದಬಾನು ಜಮಾದಾರ, ಗುತ್ತಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹಸ್ಮತಬಿ ಮಹಮದ್‌ ಅಲಿ ರಿತ್ತಿ, ಗುತ್ತಲ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಅನ್ನಪೂರ್ಣ ಶಿವಾನಂದ ಬಂಡಿವಡ್ಡರ, ಡಿವೈಎಸ್ಪಿ ವಿಜಯಕುಮಾರ ಸಂತೋಷ ಹಾಗೂ ಹಾವೇರಿ ನಗರಸಭೆ ಹಾಗೂ ಗುತ್ತಲ ಪಟ್ಟಣ ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳು, ಪೌರಕಾರ್ಮಿಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.