ಹಾವೇರಿ: ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದುರ್ಗಾ ದೌಡ್ ಪಥಸಂಚಲನವು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಜರುಗಿತು. ಜನರು, ಕೈಯಲ್ಲಿ ಕತ್ತಿ ಹಿಡಿದು ಪಥಸಂಚಲನದಲ್ಲಿ ಪಾಲ್ಗೊಂಡರು.
ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಹಾಗೂ ಬಜರಂಗದಳದ ವತಿಯಿಂದ ಹಮ್ಮಿಕೊಂಡಿದ್ದ ದುರ್ಗಾ ದೌಡ್ ಪಥಸಂಚಲನದಲ್ಲಿ ನಗರದ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ನಗರದ ದ್ಯಾಮವ್ವದೇವಿ ದೇವಸ್ಥಾನದ ಆವರಣದಿಂದ ಶುರುವಾದ ಪಥ ಸಂಚಲನಕ್ಕೆ ಹರಸೂರು ಬಣ್ಣದಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ಶ್ವೇತ ವಸ್ತ್ರ, ಕೇಸರಿ ಪೇಟಾ ಹಾಗೂ ಶಾಲು ಧರಿಸಿದ್ದ ಜನರು, ಕೈಯಲ್ಲಿ ಕತ್ತಿ ಹಿಡಿದು ಪಥಸಂಚಲನದಲ್ಲಿ ಹೆಜ್ಜೆ ಹಾಕಿದರು. ಪಥಸಂಚಲನದುದ್ದಕ್ಕೂ ‘ಜೈ ಶಿವಾಜಿ’ ಸೇರಿದಂತೆ ಹಲವು ಘೋಷಣೆಗಳನ್ನು ಕೂಗಿದರು.
ಸುಭಾಷ ವೃತ್ತ, ಡಾ. ಬಿ.ಆರ್.ಅಂಬೇಡ್ಕರ ವೃತ್ತ, ಮೇಲಿನ ಪೇಟೆ, ದ್ಯಾಮವ್ವನಗುಡಿ ಪಾದಗಟ್ಟಿ, ಎಂ.ಜಿ. ರಸ್ತೆ, ಮಹಾತ್ಮಾ ಗಾಂಧಿ ವೃತ್ತದ ಮೂಲಕ ಸಾಗಿದ ಪಥಸಂಚಲನ, ರಾಮದೇವರ ಮಂದಿರದಲ್ಲಿ ಸಮಾಪ್ತಗೊಂಡಿತು.
ರಾಮದೇವರ ಗುಡಿಯಲ್ಲಿ ಶಸ್ತ್ರಾಸ್ತ್ರ ಪೂಜೆ ನೆರವೇರಿತು. ವಿಎಚ್ಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಅನಿಲ ಹಲವಾಗಿಲ, ಭಜರಂಗದಳ ತಾಲ್ಲೂಕು ಸಂಯೋಜಕ ಸಂತೋಷ ನೂರಂದೇವರಮಠ, ಪ್ರವೀಣ ಗಾಣಿಗೇರ, ಶರಣಬಸಪ್ಪ ದೊಡ್ಡಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.