ADVERTISEMENT

ಸೋಮಾರಿತನ ಬಿಟ್ಟಾಗ ಸಾಧನೆ ಸಾಧ್ಯ

ರಾಜ್ಯಮಟ್ಟದ ಜಂಪ್‌ರೋಪ್‌ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೀರ್‌ಜಾದೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 19:45 IST
Last Updated 4 ಡಿಸೆಂಬರ್ 2019, 19:45 IST
ಬಾಲಕಿಯರ ವಿಭಾಗದ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಜಂಪ್‌ರೋಪ್‌ ಪಂದ್ಯಾವಳಿಯು ಮಂಗಳವಾರ ಹಾವೇರಿಯಲ್ಲಿ ನಡೆಯಿತು
ಬಾಲಕಿಯರ ವಿಭಾಗದ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಜಂಪ್‌ರೋಪ್‌ ಪಂದ್ಯಾವಳಿಯು ಮಂಗಳವಾರ ಹಾವೇರಿಯಲ್ಲಿ ನಡೆಯಿತು   

ಹಾವೇರಿ: ಸೋಮಾರಿತನ ಬಿಟ್ಟಾಗಕ್ರೀಡಾಪಟುಗಳು ಸಾಧನೆ ಮಾಡಲು ಸಾಧ್ಯ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಸಿ.ಪೀರ್‌ಜಾದೆ ಹೇಳಿದರು.

ನಗರದ ದಾನೇಶ್ವರಿನಗರದಲ್ಲಿರುವ ಪದವಿಪೂರ್ವ ಕಾಲೇಜುಗಳ ನೌಕರರ ಸಭಾಭವನದಲ್ಲಿ ಮಂಗಳವಾರ ನಡೆದ ರಾಜ್ಯಮಟ್ಟದ ಜಂಪ್‌ರೋಪ್‌ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಜಂಪ್‌ರೋಪ್‌ ಕ್ರೀಡಾಕೂಟ ಆರಂಭಿಸಿ 10 ವರ್ಷವಾದರೂ ರಾಷ್ಟ್ರಮಟ್ಟದಲ್ಲಿ ಮನ್ನಣೆ ಸಿಗದಿರುವುದು ಬೇಸರದ ಸಂಗತಿ. ಈ ಆಟವನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿದರೆ ಇನ್ನಷ್ಟು ಕ್ರೀಡಾಪಟುಗಳನ್ನು ಗುರುತಿಸಲು ಸಾಧ್ಯವಾಗುತ್ತದೆ’ ಎಂದರು.

ADVERTISEMENT

‘ಹಿಂದಿನ ವರ್ಷಗಳಲ್ಲಿ ಪದವಿಪೂರ್ವ ಕಾಲೇಜುಗಳಲ್ಲಿ ಕ್ರೀಡಾಕೂಟ ನಡೆಯುವುದು ಅಪರೂಪವಾಗಿತ್ತು. ಈಗ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರಂತರ ಪ್ರಗತಿ ಸಾಧಿಸುತ್ತಿದೆ. ಆಟಗಾರರು ಸೋಲೆ ಗೆಲುವಿನ ಮೆಟ್ಟಿಲು ಎಂದು ತಿಳಿದುಕೊಳ್ಳಬೇಕು’ ಎಂದು ಕ್ರೀಡಾಪಟುಗಳಿಗೆ ಸಲಹೆ ನೀಡಿದರು.

ಪ್ರೇಮನಾಥ ಶೆಟ್ಟಿ ಮಾತನಾಡಿ, ‘ಮುಂದಿನ ವರ್ಷದಿಂದ ಈ ಕ್ರೀಡಾಕೂಟವನ್ನು ರಾಷ್ಟ್ರಮಟ್ಟದಲ್ಲಿ ನಡೆಸುವಂತಾಗಬೇಕು. ಇದರ ಬಗ್ಗೆ ಆಟಗಾರರು ಇನ್ನಷ್ಟು ಕೌಶಲವನ್ನು ಬೆಳೆಸಿಕೊಳ್ಳಬೇಕು. ಈ ಆಟ ದೈಹಿಕ ಕಸರತ್ತಿನ ಜತೆಗೆ ಹಾಗೂ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ’ ಎಂದರು.

ಕ್ರೀಡಾಕೂಟಕ್ಕೆ 17 ಜಿಲ್ಲೆಯ ತಂಡ:ರಾಜ್ಯಮಟ್ಟದ ಜಂಪ್‌ರೋಪ್‌ ಪಂದ್ಯಾವಳಿಗೆ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ17 ಜಿಲ್ಲೆಯ ತಂಡಗಳು ಪಾಲ್ಗೊಂಡಿದ್ದವು. ಒಂದು ತಂಡದಲ್ಲಿ 12 ಮಂದಿ ಆಟಗಾರರು ಇರುತ್ತಾರೆ. ಈ ಪಂದ್ಯಾಟದಲ್ಲಿ 30 ಸೆಕೆಂಡ್‌ ವಿಭಾಗದ ಸ್ಪೀಡ್‌ ಜಂಪ್‌ರೋಪ, 3 ನಿಮಿಷದ ವಾಕಿಂಗ್‌ ಸ್ಟೇಲ್‌, 30 ಸೆಕೆಂಡ್‌ ಸ್ಪೀಡ್‌ ರಿಲೇ, 30 ಸೆಕೆಂಡ್‌ ಡಬಲ್‌ ಅಂಡರ್(ಒಮ್ಮೆ ಜಿಗಿದರೆ ಎರಡು ಬಾರಿ ಪಾರಾಗಬೇಕು)‌, 30 ಸೆಕೆಂಡ್‌ ಡಬಲ್‌ ಅಂಡರ್‌ ಸ್ಪೀಡ್‌ ರಿಲೇ ಹಾಗೂ ಫ್ರೀ ಸ್ಟೈಲ್‌ ವಿಭಾಗಗಳಿವೆ. ನಿರ್ದಿಷ್ಟಸಮಯದಲ್ಲಿ ಅತಿ ಹೆಚ್ಚು ಜಂಪ್‌ರೋಪ್‌ ಮಾಡಿದವರನ್ನು ವಿಜೇತರಾಗಿಆಯ್ಕೆ ಮಾಡಲಾಗುತ್ತದೆ. ಜಂಪ್‌ರೋಪ್‌ ಮಾಡುವಾಗ ಬಲಗಾಲಿನ ಲೆಕ್ಕವನ್ನು ಹಾಕಲಾಗುತ್ತದೆ ಎಂದು ದೈಹಿಕ ಶಿಕ್ಷಣ ಶಿಕ್ಷಕರು ತಿಳಿಸಿದರು.

ಅಂತರ ರಾಷ್ಟ್ರೀಯ ಥ್ರೋಬಾಲ್‌ ಆಟಗಾರ್ತಿ ಪುಷ್ಪಾ ನಿಂಗಪ್ಪ ಮಲ್ಲಾಪುರ, ವಾಲಿಬಾಲ್‌ ಆಟಗಾರ ಎಚ್‌.ಡಿ.ಸೂರ್ಯ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಕಾರ್ಯಾಧ್ಯಕ್ಷ ಎಸ್‌.ಎಸ್‌.ಕಬ್ಬಿಣಕಂತಿಮಠ, ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್‌.ಎಸ್‌.ನಿಸ್ಸಿಮಗೌಡರ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಬಾರಕೇರ, ಮಂಜುನಾಥ ಬೆನಕನಕೊಂಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.