ADVERTISEMENT

ಗ್ಯಾಸ್‌ ಏಜೆನ್ಸಿಗಳಿಂದ ಹೆಚ್ಚಿನ ಹಣ ವಸೂಲಿ: ಕರವೇ ಆರೋಪ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 15:51 IST
Last Updated 6 ಜನವರಿ 2020, 15:51 IST

ಹಾವೇರಿ:ಹಿರೇಕೆರೂರು ಮತ್ತು ರಟ್ಟೀಹಳ್ಳಿ ತಾಲ್ಲೂಕುಗಳಲ್ಲಿ ಶ್ರೀ ಬಸವೇಶ್ವರ ಎಚ್.ಪಿ. ಗ್ಯಾಸ್ ಏಜೆನ್ಸಿ ಸರ್ಕಾರ ನಿಗಪಡಿಸಿದ ದರಕ್ಕಿಂತ ಹೆಚ್ಚಿನ ಹಣವನ್ನು ಗ್ರಾಹಕರಿಂದ ಪಡೆಯುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ್ರ ಬಣ) ರಾಜ್ಯಸಂಘಟನಾ ಕಾರ್ಯದರ್ಶಿ ಎಸ್‌.ಬಿ. ಕರಬಸಯ್ಯ ಆರೋಪಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಬಸವೇಶ್ವರ ಗ್ಯಾಸ್‌ ಏಜೆನ್ಸಿ ತಾಲ್ಲೂಕಿನಲ್ಲಿ ಆರಂಭವಾದಾಗಿನಿಂದಲೂ ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ₹30 ಹಣವನ್ನು ಹೆಚ್ಚುವರಿಯಾಗಿ ಪಡೆಯುವ ಮೂಲಕ ಲೂಟಿ ಹೊಡೆಯುತ್ತಿದೆ ಎಂದು ದೂರಿದರು.

ಸಾರ್ವಜನಿಕರಿಂದ ಅಷ್ಟೇ ಅಲ್ಲದೆ, ಸರ್ಕಾರಿ ಶಾಲೆಗಳ ಬಿಸಿಯೂಟ ತಯಾರಿಗೆ ಇದೇ ಏಜೆನ್ಸಿ ಸಿಲಿಂಡರ್‌ ಪೂರೈಕೆ ಮಾಡುತ್ತದೆ. ಅಲ್ಲಿಯೂ ಸಹ ₹20 ರಿಂದ ₹30 ಹೆಚ್ಚುವರಿಯಾಗಿ ಹಣ ವಸೂಲಿ ಮಾಡುತ್ತಿದೆ ಎಂದರು.

ADVERTISEMENT

ಗ್ಯಾಸ್ ವಿತರಣೆ ಹೋಗುವಾಗ 5 ಕಿ.ಮೀ. ಒಳಗೆ ಯಾವುದೇ ದರ ತೆಗೆದುಕೊಳ್ಳುವಂತಿಲ್ಲ. ಆದರೆ, ಈ ಏಜೆನ್ಸಿಯವರು ಹಳ್ಳಿಗೆ ಹೋದರೆ ಹೆಚ್ಚಿನ ಹಣವನ್ನು ತೆಗೆದುಕೊಳ್ಳುತ್ತಾರೆ. ಅಲ್ಲದೆ, ಪಟ್ಟಣದವರಿಂದಲೂ ಹಣ ಸಂಗ್ರಹಿಸುತ್ತಾರೆ. ಈ ಕುರಿತು ಹಿರೇಕೆರೂರಿನಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.

ಹೆಚ್ಚು ಹಣ ಪಡೆಯುತ್ತಿರುವ ಗ್ಯಾಸ್‌ ಏಜೆನ್ಸಿಯ ಪರವಾನಗಿಯನ್ನು ರದ್ದು ಪಡಿಸಬೇಕು. ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ಇವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು

ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ಮುದಿಗೌಡ್ರ, ಯಶವಂತಗೌಡ ದೊಡ್ಡಗೌಡ್ರ, ಹಸನ್‍ಸಾಬ್‌ ಹತ್ತಿಮತ್ತೂರ, ಹಾಲೇಶ ಹಾಲಣ್ಣನವರ, ಗಿರೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.