
ಹಾವೇರಿಯಲ್ಲಿ ಭಾನುವಾರ ಆಯೋಜಿಸಿದ್ದ ‘ನಮ್ಮ ಪೊಲೀಸ್ – ನಮ್ಮ ಹೆಮ್ಮೆ’ ಓಟದಲ್ಲಿ ಅಧಿಕಾರಿಗಳು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು
ಹಾವೇರಿ: ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ನಮ್ಮ ಪೊಲೀಸ್ – ನಮ್ಮ ಹೆಮ್ಮೆ’ ಓಟಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಪೊಲೀಸ್ ಅಧಿಕಾರಿಗಳು–ಸಿಬ್ಬಂದಿ, ಎಸ್ಬಿಐ ಬ್ಯಾಂಕ್ ಅಧಿಕಾರಿಗಳು–ಸಿಬ್ಬಂದಿ ಹಾಗೂ ಸಾರ್ವಜನಿಕರು ಓಟದಲ್ಲಿ ಪಾಲ್ಗೊಂಡರು. ಓಟದ ಮೂಲಕ ಪೊಲೀಸರ ಕೆಲಸವನ್ನು ಶ್ಲಾಘಿಸಿದರು.
ಹಳೇ ಪಿ.ಬಿ. ರಸ್ತೆಯಲ್ಲಿರುವ ಪೊಲೀಸ್ ಜಿಲ್ಲಾ ಕಚೇರಿ ಆವರಣದಿಂದ ಆರಂಭವಾದ ಓಟಕ್ಕೆ ಜಿಲ್ಲಾ ಎಸ್.ಪಿ. ಯಶೋಧಾ ವಂಟಗೋಡಿ ಅವರು ಚಾಲನೆ ನೀಡಿದರು.
ಪುರುಷರಿಗಾಗಿ 5 ಕಿ.ಮೀ., 10 ಕಿ.ಮೀ. ಹಾಗೂ ಮಹಿಳೆಯರಿಗಾಗಿ 5 ಕಿ.ಮೀ. ಓಟ ಆಯೋಜಿಸಲಾಗಿತ್ತು. ಹಾವೇರಿ ಮಾತ್ರವಲ್ಲದೇ ಜಿಲ್ಲೆಯ ಹಲವು ಪಟ್ಟಣ ಹಾಗೂ ಗ್ರಾಮಗಳ ಜನರು ಓಟದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಪೊಲೀಸ್ ಕಚೇರಿ ಆವರಣದಿಂದ ಆರಂಭವಾದ ಓಟ, ಹೊಸಮನಿ ಸಿದ್ದಪ್ಪ ವೃತ್ತ, ಹುಕ್ಕೇರಿ ಮಠ ರಸ್ತೆ, ರೈಲು ನಿಲ್ದಾಣ ಮಾರ್ಗ, ಅಂಬೇಡ್ಕರ್ ಕಾಲೊನಿ, ಸುಭಾಷ್ ವೃತ್ತ, ಜೆಎಚ್ ಪಟೇಲ್ ವೃತ್ತ ಹಾಗೂ ಕಿತ್ತೂರು ಚನ್ನಮ್ಮ ವೃತ್ತ ಮಾರ್ಗವಾಗಿ ಸಂಚರಿಸಿತು. ಪೊಲೀಸ್ ಕಚೇರಿ ಆವರಣದಲ್ಲಿಯೇ ಓಟ ಸಮಾಪ್ತಿಗೊಂಡಿತು.
ಬಹುಮಾನ ವಿತರಣೆ: ಪುರುಷರ 10 ಕಿ.ಮೀ. ಓಟದಲ್ಲಿ ಮಂಜುನಾಥ ಬೇಲೂರಪ್ಪನವರ ಮೊದಲ ಸ್ಥಾನ ಪಡೆದರು. ಸಂಜೀವಕುಮಾರ ಬ್ಯಾಟಪ್ಪನವರ -ದ್ವಿತೀಯ, ರಮೇಶ ಬೆಳ್ಳಟ್ಟಿ -ತೃತೀಯ ಸ್ಥಾನ ಗಿಟ್ಟಿಸಿಕೊಂಡರು. 5 ಕಿ.ಮೀ. ಓಟದಲ್ಲಿ ಪ್ರಭು ಲಮಾಣಿ ಪ್ರಥಮ, ಕಿರಣ ಹೊನ್ನಳ್ಳಿ -ದ್ವಿತೀಯ, ಸುದೀಪ ಹರಿಜನ -ತೃತೀಯ ಸ್ಥಾನ ಪಡೆದರು.
ಮಹಿಳೆಯರ 5 ಕಿ.ಮೀ. ಓಟದಲ್ಲಿ ಶಿಲ್ಪಾ ಹೊಸಮನಿ ಪ್ರಥಮ, ಸುಪ್ರಿತಾ ಸಿದ್ದಿ -ದ್ವಿತೀಯ ಹಾಗೂ ಸಾಕ್ಷಿ ಅವರು ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಪ್ರಶಸ್ತಿ ಪತ್ರ, ಪದಕ ಹಾಗೂ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಜಿ.ಪಂ. ಸಿಇಒ ರುಚಿ ಬಿಂದಲ್, ಹೆಚ್ಚುವರಿ ಪೊಲೀಸ್ ಎಸ್ಪಿ ಎಲ್.ವೈ. ಶಿರಕೋಳ, ಡಿವೈಎಸ್ಪಿ ಗಿರಿಮಲ್ಲಪ್ಪ ತಳಕಟ್ಟಿ ಹಾಗೂ ಇತರರು ಭಾಗವಹಿಸಿದ್ದರು.