ಬಂಧನ
(ಪ್ರಾತಿನಿಧಿಕ ಚಿತ್ರ)
ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಮದಗ ಮಾಸೂರು ಕೆರೆಯಲ್ಲಿ ತಳ್ಳಿ ಶಫೀವುಲ್ಲಾ (38) ಎಂಬುವವರನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ, ಪತ್ನಿ ಶಹೀನಾಬಾನು ಹಾಗೂ ಅವರ ಸ್ನೇಹಿತ ಮುಬಾರಕ್ ಖಲಂದರಸಾಬ ಮುಲ್ಲಾ ಎಂಬುವವರನ್ನು ಹಿರೇಕೆರೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಹರಿಹರ ಬೆಂಕಿನಗರದ ನಿವಾಸಿಯಾಗಿದ್ದ ಶಫೀವುಲ್ಲಾ, ಗೌಂಡಿ ಕೆಲಸ ನಿಮಿತ್ತ ಹಲಗೇರಿಯಲ್ಲಿ ನೆಲೆಸಿದ್ದರು. ಅವರನ್ನು ಜುಲೈ 19ರಂದು ಕೆರೆಯಲ್ಲಿ ತಳ್ಳಿ ಕೊಲೆ ಮಾಡಲಾಗಿತ್ತು. ಜುಲೈ 26ರಂದು ಮೃತದೇಹ ಪತ್ತೆಯಾಗಿತ್ತು. ಮೈಮೇಲಿದ್ದ ಗಾಯದ ಗುರುತಗಳನ್ನು ಆಧರಿಸಿ ಶಫೀವುಲ್ಲಾ ಅವರ ಸಹೋದರ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.
‘ಶಹೀನಾಬಾನು ಹಾಗೂ ಸ್ನೇಹಿತ ಮುಬಾರಕ್ ಮುಲ್ಲಾ ನಡುವೆ ಸಲುಗೆ ಇತ್ತೆಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಇಬ್ಬರೂ ಸೇರಿಕೊಂಡು ಕೊಲೆಗೆ ಸಂಚು ರೂಪಿಸಿದ್ದರು. ಆರೋಪಿ ಮುಬಾರಕ್, ಶಫೀವುಲ್ಲಾ ಅವರನ್ನು ಬೈಕ್ನಲ್ಲಿ ಕರೆದೊಯ್ದು ಮದ್ಯ ಕುಡಿಸಿದ್ದರು. ಫೋಟೊ ತೆಗೆಯುವುದಾಗಿ ಹೇಳಿ ಮದಗ ಮಾಸೂರು ಕೆರೆ ಬಳಿ ನಿಲ್ಲಿಸಿ ತಳ್ಳಿ ಕೊಂದಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿದರು.
‘ಕೊಲೆ ವಿಷಯ ಗೊತ್ತಿದ್ದರೂ ಆರೋಪಿ ಶಹೀನಾಬಾನು, ಪತಿ ಕಾಣೆಯಾದ ಬಗ್ಗೆ ಹಲಗೇರಿ ಠಾಣೆಗೆ ದೂರು ನೀಡಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆ ವರದಿಯಿಂದ ಕೊಲೆ ಅನುಮಾನ ಬಂದಿತ್ತು. ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಿಸಿದಾಗ, ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.