ADVERTISEMENT

ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 14:57 IST
Last Updated 4 ಏಪ್ರಿಲ್ 2020, 14:57 IST
-
-   

ಹಾವೇರಿ: ಲಾಕ್‍ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕೊರತೆಯಾಗದಂತೆ ಕಾರ್ಮಿಕ ಇಲಾಖೆಯಿಂದ ಆಹಾರ ಸಾಮಗ್ರಿ ಪೊಟ್ಟಣಗಳ ವಿತರಣೆಯನ್ನು ಶಾಸಕರಾದ ನೆಹರು ಓಲೇಕಾರ ವಿತರಿಸಿದರು.

ನಗರಸಭೆ ಆವರಣದಲ್ಲಿ ಶನಿವಾರ ಬೆಳಿಗ್ಗೆ ಅಸಂಘಟಿತ ಕಾರ್ಮಿಕ ಕುಟುಂಬಗಳಿಗೆ ಹಾಗೂ ವಲಸೆ ಕಾರ್ಮಿಕರಿಗೆ ರೇಷನ್ ಕಿಟ್‍ಗಳನ್ನು ವಿತರಿಸಿದರು. ಹಾಗೂ ಕಾರ್ಮಿಕ ಇಲಾಖೆ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಕಾರ್ಮಿಕರಿಗೆ ಕೋವಿಡ್-19 ಸುರಕ್ಷಾ ಸಾಮಗ್ರಿಗಳಾದ ಸೋಪು, ಡೆಟಾಲ್ ಹ್ಯಾಂಡ್ ವಾಶ್, ಸ್ಯಾನಿಟೈಸರ್, ಮಾಸ್ಕ್‌ಗಳನ್ನು ಒಳಗೊಂಡಕಿಟ್‍ಗಳನ್ನು ವಿತರಿಸಲಾಯಿತು.

ಕಾರ್ಮಿಕರಿಗೆ ಜಾಗೃತಿಯ ಕರಪತ್ರಗಳನ್ನು ನೀಡಿ, ಸಾಮಾಜಿಕ ಅಂತರವವನ್ನು ಕಾಪಾಡಿಕೊಳ್ಳಿ, ಲಾಕ್‍ಡೌನ್ ಅವಧಿಯಲ್ಲಿ ಮನೆಯಿಂದ ಹೊರಹೋಗದಂತೆ ಮನವಿ ಮಾಡಿಕೊಳ್ಳಲಾಯಿತು. ಯಾವುದೇ ವ್ಯಕ್ತಿಗಳಿಗೆ ಜ್ವರ, ತಲೆನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಾ, ಬೇಧಿ ಉಂಟಾದಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ. ವಯಕ್ತಿಕ ಸ್ವಚ್ಛತೆ ಹಾಗೂ ಸುರಕ್ಷತೆಯನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.

ADVERTISEMENT

ಕಾರ್ಮಿಕ ಅಧಿಕಾರಿ ಕಲಾವತಿ ಸಾತೇನಹಳ್ಳಿ ಮಾತನಾಡಿ, ಪ್ರಸ್ತುತ 500 ಕಾರ್ಮಿಕರನ್ನು ಗುರುತಿಸಲಾಗಿದೆ. ಪ್ರತಿ ಕಾರ್ಮಿಕರಿಗೆ 8 ಕೆ.ಜಿ. ಅಕ್ಕಿ, ತಲಾ ಒಂದು ಕೆ.ಜಿ. ಬೆಳೆ, ಎಣ್ಣೆ, ಗೋಧಿ, ಉಪ್ಪು, ಈರುಳ್ಳಿ ಸೇರಿದಂತೆ ಆಹಾರ ಕಿಟ್‍ ಅನ್ನು ವಿತರಿಸಲಾಗುತ್ತಿದೆ. ಜಿಲ್ಲೆಯ ಐದು ಸಾವಿರ ಕಾರ್ಮಿಕರಿಗೆ ಕೊರೊನಾ ಸುರಕ್ಷತಾ ಕಿಟ್‍ಗಳನ್ನು ರೆಡ್ ಕ್ರಾಸ್ ಸಂಸ್ಥೆಯಿಂದ ವಿತರಿಸಲಾಗುತ್ತಿದೆ. ಕಾರ್ಮಿಕರಿಗೆ ಅಗತ್ಯಕ್ಕೆ ತಕ್ಕಂತೆ ಆಹಾರ ಕಿಟ್‍ಗಳ ವಿತರಣೆ ಹೆಚ್ಚಾಗಲಿದೆ ಎಂದು ವಿವರಿಸಿದರು.

ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷರಾದ ಬಸವರಾಜ ಅರಬಗೊಂಡ, ನಗರಸಭೆ ಸದಸ್ಯರಾದ ಗಿರೀಶ ತುಪ್ಪದ, ಬಾಬಣ್ಣ ಮೋಮಿನಗಾರ, ಜಗದೀಶ ಮಲಗೋಡ, ತಹಶೀಲ್ದಾರ ಶಂಕರ, ಪೌರಾಯುಕ್ತ ಬಸವರಾಜ ಜಿದ್ದಿ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರ ಹುಬ್ಬಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.