ADVERTISEMENT

ಸವಣೂರು: ಮಣ್ಣಿನಲ್ಲಿ ಹುದುಗಿರುವ ಐತಿಹಾಸಿಕ ದೇಗುಲ

ಕಾರಡಗಿ ಗ್ರಾಮದ ತ್ರಿಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಭಕ್ತರ ಮನವಿ

​ಪ್ರಜಾವಾಣಿ ವಾರ್ತೆ
Published 7 ಮೇ 2022, 19:30 IST
Last Updated 7 ಮೇ 2022, 19:30 IST
ಸವಣೂರು ತಾಲ್ಲೂಕಿನ ಸುಕ್ಷೇತ್ರ ಕಾರಡಗಿ ವೀರಭದ್ರೇಶ್ವರ ದೇವಸ್ಥಾನದ ಬಲಬಾಗಲ್ಲಿರುವ ತ್ರಿಲಿಂಗೇಶ್ವರ(ಡೊಳ್ಳೇಶ್ವರ) ದೇವಸ್ಥಾನ ಸಂಪೂರ್ಣವಾಗಿ ಮಣ್ಣಿನಲ್ಲಿ ಹುದುಗಿ ಹೋಗಿರುವ ದೃಶ್ಯ
ಸವಣೂರು ತಾಲ್ಲೂಕಿನ ಸುಕ್ಷೇತ್ರ ಕಾರಡಗಿ ವೀರಭದ್ರೇಶ್ವರ ದೇವಸ್ಥಾನದ ಬಲಬಾಗಲ್ಲಿರುವ ತ್ರಿಲಿಂಗೇಶ್ವರ(ಡೊಳ್ಳೇಶ್ವರ) ದೇವಸ್ಥಾನ ಸಂಪೂರ್ಣವಾಗಿ ಮಣ್ಣಿನಲ್ಲಿ ಹುದುಗಿ ಹೋಗಿರುವ ದೃಶ್ಯ   

ಸವಣೂರು: ಸುಕ್ಷೇತ್ರ ಕಾರಡಗಿ ಗ್ರಾಮದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ಬಲಭಾಗದ ಎದುರು ಬಂಕಾಪುರದ 60 ಕಂಬಗಳಮಾದರಿಯ ಒಂದು ಪುರಾತನ ಕಾಲದ ದೇವಸ್ಥಾನ ಮಣ್ಣಿನಲ್ಲಿ ಹೂತು ಹೋಗಿದೆ. ಅಷ್ಟೇ ಅಲ್ಲದೇ ಈಚೆಗೆ ಸುರಿದ ಮಳೆಗೆ ದೇವಸ್ಥಾನ ಸಂಪೂರ್ಣವಾಗಿ ಜಲಾವೃತವಾಗಿದೆ.

ಈ ದೇವಾಲಯದ ಇತಿಹಾಸ ಬಲ್ಲವರು ಇಲ್ಲಿ ಮೂರು ಲಿಂಗಗಳು ಇರುವುದರಿಂದ ತ್ರಿಲಿಂಗೇಶ್ವರ (ಡೊಳ್ಳೇಶ್ವರ) ದೇವಸ್ಥಾನ ಎಂದು ಕರೆಯುತ್ತಾರೆ. ಇನ್ನೂ ಕೆಲವರು ಪಂಚಲಿಂಗೇಶ್ವರ ದೇವಾಲಯ ಎಂದು ಕರೆಯುವ ವಾಡಿಕೆಯೂ ಇದೆ.

ಐತಿಹಾಸಿಕ ದೇವಾಲಯವೊಂದು ಬೆಳಕಿಗೆ ಬಾರದೇ ಮಣ್ಣಲ್ಲಿ ಹುದಗಿ ಹೋಗಿದ್ದು,ಪ್ರಾಚ್ಯವಸ್ತು ಇಲಾಖೆಯಿಂದ ಕೂಡಾ ಕಡೆಗಣನೆಗೆ ಒಳಗಾಗಿ ಅವಸಾನದ ಅಂಚಿನಲ್ಲಿದೆ.

ADVERTISEMENT

ಇತಿಹಾಸಕಾರರು ಹೇಳುವ ಪ್ರಕಾರ ಕ್ರಿ.ಶ 1770ರ ದಶಕದಲ್ಲಿ ಕಾರಡಗಿಯು ಕೂಡಾ ನವಾಬರ ಆಳ್ವಿಕೆಯಲ್ಲಿ ಒಂದು ಸಣ್ಣ ಸಂಸ್ಥಾನವಾಗಿತ್ತು. ಅಂದಿನಿಂದ ಈ ತ್ರಿಕಾಲೇಶ್ವರ ‌ದೇವಸ್ಥಾನಕ್ಕೂ ಹಾಗೂ ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದ ನಡುವೇ ಒಂದು ಸುರಂಗ ಮಾರ್ಗವಿದೆ. ರಾಜರ ಆಡಳಿತದ ಸಮಯದಲ್ಲಿ ಈ ಸುರಂಗ ಮಾರ್ಗದ ಮೂಲಕ ರಾಜರು ಈ ದೇವಸ್ಥಾನಕ್ಕೆ ಆಗಮಿಸಿ ಪೂಜೆಯನ್ನು ಸಲ್ಲಿಸುತ್ತಿದ್ದರು ಎನ್ನುತ್ತಾರೆ ಇತಿಹಾಸಕಾರರು.

ಕಾರಡಗಿ ಗ್ರಾಮವು ವೀರಭದ್ರೇಶ್ವರ ದೇವಸ್ಥಾನದ ಹೆಸರಿನಿಂದ ಪ್ರಖ್ಯಾತಿಯನ್ನು ಪಡೆದಿದ್ದರೂ ವೀರಭದ್ರೇಶ್ವರ ಮೂರ್ತಿ ಉದ್ಭವವಾಗುವ ಮೊದಲೇ ಇಲ್ಲಿ ತ್ರಿಲಿಂಗೇಶ್ವರ ದೇವಸ್ಥಾನ ಇತ್ತು ಎಂಬುದು ಸ್ಥಳೀಯರ ವಾದ.

ದೇವಸ್ಥಾನದ ಸಮಿತಿಯವರು ಉಳಿದ ಕಾರ್ಯಗಳಿಗೆ ಕೋಟ್ಯಂತರ ಹಣವನ್ನು ಬಳಸಿ ವೀರಭದ್ರೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕೈಗೊಂಡಿದ್ದಾರೆ. ಆದರೆ, ಹೊರ ರಾಜ್ಯದಿಂದ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಮಾಹಿತಿಗಾಗಿ ಸಮಿತಿಯವರಾಗಲಿ ಅಥವಾ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳಾಗಲಿ, ಪಂಚಲಿಂಗೇಶ್ವರ ದೇವಾಲಯದ ಬಗ್ಗೆ ಮಾಹಿತಿ ನೀಡುವ ಒಂದೇ ಒಂದು ನಾಮಫಲಕ ಹಾಕಿಲ್ಲ.

ಇತಿಹಾಸ ಹೇಳುವ ದೇವಾಲಯ ಅಳಿದು ಹೋಗುವ ಮೊದಲೇ ಸಂಬಂಧಪಟ್ಟ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಲಿ ಹಾಗೂ ಈ ಪ್ರಾಚೀನ ದೇವಾಲಯದ ಜೀರ್ಣೋದ್ಧಾರ ಕೈಗೊಳ್ಳಲಿ ಎಂಬುವದು ಈ ದೇವಾಲಯದ ಭಕ್ತರ ಕೋರಿಕೆಯಾಗಿದೆ.

‘ದೇಗುಲ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಿ’

ಪುರಾತನ ಕಾಲದ ತ್ರಿಕಾಲೇಶ್ವರ ದೇವಸ್ಥಾನ ಪ್ರಾಚ್ಯವಸ್ತು ಇಲಾಖೆಗೆ ಒಳಪಟ್ಟಿದೆ. ಈ ದೇವಸ್ಥಾನದ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರಕ್ಕೆ ಇಲಾಖೆ ಮುಂದಾಗಬೇಕು ಎಂದು ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇಲಾಖೆ ಅಧಿಕಾರಿಗಳು ಸುಕ್ಷೇತ್ರ ಕಾರಡಗಿ ಕ್ಷೇತ್ರಕ್ಕೆ ಕೂಡಲೇ ಆಗಮಿಸಿ ದೇವಸ್ಥಾನದ ಅಭಿವೃದ್ಧಿಗೆ ಮುಂದಾಗಬೇಕು ಎನ್ನುತ್ತಾರೆಸುಕ್ಷೇತ್ರ ಕಾರಡಗಿ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷಬಸನಗೌಡ ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.