ADVERTISEMENT

ಕೊರತೆಗಳಿದ್ದರೆ ಗಮನಕ್ಕೆ ತನ್ನಿ: ಜಿಲ್ಲಾಧಿಕಾರಿ

ಬಸಾಪುರ ಕೋವಿಡ್‌ ಕೇರ್‌ ಸೆಂಟರ್‌ಗೆ ಭೇಟಿ: ಮೂಲಸೌಕರ್ಯ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 16:22 IST
Last Updated 1 ಆಗಸ್ಟ್ 2020, 16:22 IST
ಬಸಾಪುರ ಕೋವಿಡ್ ಕೇರ್ ಸೆಂಟರ್‌ಗೆ ಜಿಲ್ಲಾಧಿಕಾರಿ ಸಂಜಯ ಬಿ. ಶೆಟ್ಟೆಣ್ಣವರ ಶನಿವಾರ ಭೇಟಿ ನೀಡಿ, ಮೂಲಸೌಕರ್ಯ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು 
ಬಸಾಪುರ ಕೋವಿಡ್ ಕೇರ್ ಸೆಂಟರ್‌ಗೆ ಜಿಲ್ಲಾಧಿಕಾರಿ ಸಂಜಯ ಬಿ. ಶೆಟ್ಟೆಣ್ಣವರ ಶನಿವಾರ ಭೇಟಿ ನೀಡಿ, ಮೂಲಸೌಕರ್ಯ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು    

ಹಾವೇರಿ: ಬಸಾಪುರ ಕೋವಿಡ್ ಕೇರ್ ಸೆಂಟರ್‌ಗೆಜಿಲ್ಲಾಧಿಕಾರಿ ಸಂಜಯ ಬಿ. ಶೆಟ್ಟೆಣ್ಣವರ ಅವರು ಶನಿವಾರ ಭೇಟಿ ನೀಡಿ, ಮೂಲಸೌಕರ್ಯಗಳ ಪರಿಶೀಲಿಸಿದರು. ನಂತರ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದರು.

ಊಟದ ವ್ಯವಸ್ಥೆ, ಶೌಚಾಲಯ ಸ್ವಚ್ಛತೆ, ಹೊದಿಕೆ, ಕುಡಿಯುವ ನೀರಿನ ವ್ಯವಸ್ಥೆ ಕುರಿತಂತೆ, ಚಿಕಿತ್ಸಾ ವ್ಯವಸ್ಥೆ ಕುರಿತಂತೆ ಪರಿಶೀಲನೆ ನಡೆಸಿದರು. ಕ್ವಾರಂಟೈನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳೊಂದಿಗೆ ಮಾತನಾಡಿ, ಯಾವುದೇ ಕೊರತೆಗಳಿದ್ದರೂ ನನ್ನ ಗಮನಕ್ಕೆ ತನ್ನಿ. ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಮಾನಸಿಕ ಒತ್ತಡಗಳಿಂದ ಮುಕ್ತವಾಗಿ ತ್ವರಿತವಾಗಿ ಗುಣಮುಖರಾಗಿ ಎಂದು ಆತ್ಮವಿಶ್ವಾಸ ತುಂಬಿದರು.

14 ದಿನ ಪೂರೈಸಿದವರನ್ನು ನಿಯಮಾನುಸಾರ ಬಿಡುಗಡೆಗೊಳಿಸುವಂತೆ ಸಲಹೆ ನೀಡಿದರು. ಯಾವುದೇ ಕೊರತೆಯಾಗದಂತೆ ಕ್ರಮವಹಿಸಬೇಕು. ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರವನ್ನು ವಿತರಿಸುವಂತೆ ಸಲಹೆ ನೀಡಿದರು.

ADVERTISEMENT

ವೈದ್ಯರ ಸಂದರ್ಶನಕ್ಕೆ ಸೂಚನೆ:ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ವಾರ್ಡ್‍ಗಳಲ್ಲಿ ಸೌಲಭ್ಯಗಳ ಕುರಿತಂತೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಕಡ್ಡಾಯವಾಗಿ ವೈದ್ಯರು ವಾರ್ಡ್‍ಗಳಿಗೆ ಭೇಟಿ ನೀಡಬೇಕು. ಪಾಸಿಟಿವ್ ವ್ಯಕ್ತಿಗಳಿಗೆ ಕಾಲಕಾಲಕ್ಕೆ ಔಷಧೋಪಾಚರದ ಜೊತೆಗೆ ಅವರೊಂದಿಗೆ ಮಾತನಾಡಿ ಯೋಗಕ್ಷೇಮ ವಿಚಾರಿಸಬೇಕು ಎಂದು ಹೇಳಿದರು.

ಆಂಬುಲೆನ್ಸ್‌ ಸೌಲಭ್ಯ:ಆಸ್ಪತ್ರೆಗೆ ದಾಖಲಿಸಲಾಗುವಾಗ ಹಾಗೂ ಬಿಡುಗಡೆ ಸಂದರ್ಭದಲ್ಲಿ ತಕ್ಷಣವೇ ಆಂಬುಲೆನ್ಸ್‌ ವ್ಯವಸ್ಥೆ ಮಾಡಬೇಕು. ಜಿಲ್ಲೆಯ ಕೋವಿಡ್ ಕೇಂದ್ರಗಳಲ್ಲಿ , ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಎಸ್. ಹಾವನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.