ಪ್ರಜಾವಾಣಿ ವಾರ್ತೆ
ಹಾವೇರಿ: ‘ಸಾಲಗಾರರು ಕಿರುಕುಳ ನೀಡುತ್ತಿದ್ದರಿಂದ ನೊಂದಿದ್ದರು’ ಎನ್ನಲಾದ ರೂಪಾ ಶಿವಪ್ಪ ಅಂಬ್ಲೇರ್ (40) ಎಂಬುವವರು ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ನದಿಯ ಮಧ್ಯದಲ್ಲಿ ಸಿಲುಕಿದ್ದ ಅವರನ್ನು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿ ಬದುಕಿಸಿದ್ದಾರೆ.
ನದಿಯಿಂದ ಹೊರಗೆ ತೆಗೆಯುತ್ತಿದ್ದಂತೆ ರೂಪಾ ಅವರನ್ನು ರಾಣೆಬೆನ್ನೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಅಸ್ವಸ್ಥಗೊಂಡಿದ್ದ ಅವರಿಗೆ ವೈದ್ಯರು ಚಿಕಿತ್ಸೆ ನೀಡಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ.
‘ರಟ್ಟೀಹಳ್ಳಿ ನಿವಾಸಿ ರೂಪಾ, ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ದೂರು ನೀಡಿದ್ದಾರೆ. ಆರೋಪಿಗಳಾದ ಕುಂಚೂರಿನ ಚನ್ನಬಸಪ್ಪ ಕಿಟ್ಟದ, ರಟ್ಟೀಹಳ್ಳಿಯ ರಮೇಶ ಹೊಸಮನಿ, ಜಟ್ಟೆಪ್ಪ ಮಾಳಗೊಂಡರ, ಸರೋಜಾ ಸೋಮಶೇಖರ ಹುರಕಡ್ಲಿ ಹಾಗೂ ತೋಟಗಂಟಿಯ ರಮೇಶ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ರಟ್ಟೀಹಳ್ಳಿ ಪೊಲೀಸರು ತಿಳಿಸಿದರು.
₹ 48 ಲಕ್ಷ ಸಾಲ ಪಡೆದಿದ್ದ ಮಹಿಳೆ: ‘ರೂಪಾ ಅವರು ಆರೋಪಿಗಳ ಬಳಿ ವಾರ–ತಿಂಗಳ ಬಡ್ಡಿಯಲ್ಲಿ ₹ 48 ಲಕ್ಷ ಸಾಲ ಪಡೆದುಕೊಂಡಿದ್ದರು. ಅದರಲ್ಲಿಯೇ ಉದ್ದಿನಕಡ್ಡಿ ತಯಾರಿಸುವ ಕಾರ್ಖಾನೆ ನಡೆಸುತ್ತಿದ್ದರು. ಅಸಲಿನ ಹಣವನ್ನು ಅರ್ಧದಷ್ಟು ಮರು ಪಾವತಿಸಿದ್ದ ಮಹಿಳೆ, ಬಡ್ಡಿ ಕಟ್ಟುವುದನ್ನು ಮುಂದುವರಿಸಿದ್ದರು’ ಎಂದು ಪೊಲೀಸರು ಹೇಳಿದರು.
‘ಕಾರ್ಖಾನೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಷ್ಟವಾಗಿತ್ತು. ಸಾಲ ಮರುಪಾವತಿಸಲು ಕಷ್ಟವಾಗಿತ್ತು. ಕಾರ್ಖಾನೆ ಬಳಿ ಬರುತ್ತಿದ್ದ ಆರೋಪಿ, ಸಾಲ ವಾಪಸು ಕೊಡುವಂತೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ಮಹಿಳೆ, ಮೂರು ತಿಂಗಳ ಹಿಂದೆ ಊರು ತೊರೆದು ಬೆಂಗಳೂರಿಗೆ ಹೋಗಿದ್ದರು. ವಾರದ ಹಿಂದೆಯಷ್ಟೇ ದಾವಣಗೆರೆಯಲ್ಲಿರುವ ಸಹೋದರಿಯ ಮನೆಗೆ ಬಂದು ಉಳಿದುಕೊಂಡಿದ್ದರು. ಬುಧವಾರ ರಟ್ಟೀಹಳ್ಳಿಗೆ ಹೊರಟಿದ್ದರು’ ಎಂದರು.
‘ನಂದಗುಡಿ ಬಳಿಯ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದರು. ರಾತ್ರಿ 12 ಗಂಟೆಯ ನಂತರ, ತುಂಗಭದ್ರಾ ನದಿಯ ಮೇಲ್ಸೇತುವೆ ಬಳಿ ಹೋಗಿ ನೀರಿಗೆ ಹಾರಿದ್ದರು. ಅಲ್ಲಿಂದ 2 ಕಿ.ಮೀ.ನಷ್ಟು ನೀರಿನಲ್ಲಿ ಮುಂದಕ್ಕೆ ಹೋಗಿದ್ದರು. ನೀಟಪಳ್ಳಿ ಬಳಿ ಮರದ ಅವಶೇಷದಲ್ಲಿ ಸಿಲುಕಿಕೊಂಡಿದ್ದರು. ನಸುಕಿನಲ್ಲಿ ಜಮೀನಿಗೆ ಬಂದಿದ್ದ ರೈತರು, ಮಹಿಳೆಯನ್ನು ನೋಡಿ ಠಾಣೆಗೆ ಮಾಹಿತಿ ನೀಡಿದ್ದರು. ಬೋಟ್ ಮೂಲಕ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಲಾಯಿತು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.