ಹಾವೇರಿ: ‘ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ಗ್ರಾಹಕ. ಗ್ರಾಹಕ ಜಾಗೃತಿಯೇ ದೇಶದ ಪ್ರಗತಿ. ಬುದ್ಧಿವಂತ ಗ್ರಾಹಕನೇ ದೇಶದ ಆಸ್ತಿ’ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಸುನಂದಾ ದುರ್ಗೆಶ್ ಹೇಳಿದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಚೈತನ್ಯ ಗ್ರಾಮೀಣ ಅಭಿವೃದ್ದಿ ಸಂಸ್ಧೆ ಹಾವೇರಿ ಆಶ್ರಯದಲ್ಲಿ ನಗರದ ಹೊಸಮಠ ಪಿ.ಯು. ಕಾಲೇಜು ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ‘ಗ್ರಾಹಕರ ಹಕ್ಕು ಮತ್ತು ಕಾಯ್ದೆ ಕುರಿತು ಕಾರ್ಯಾಗಾರ’ ಉದ್ಘಾಟಸಿ ಮಾತನಾಡಿದರು.
ಗ್ರಾಹಕ ಹಕ್ಕು ಕಾಯ್ದೆ 1986ರಲ್ಲಿ ಜಾರಿಗೆ ಬಂದರೂ ಅದರ ಬಗ್ಗೆ ಶೇ 90ರಷ್ಟು ಜನರಿಗೆ ಅರಿವಿಲ್ಲ. ಗ್ರಾಹಕ ಹಕ್ಕು ಕಾಯ್ದೆ ಬಗ್ಗೆ ತಿಳಿದುಕೊಳ್ಳುವುದು ಹಾಗೂ ವ್ಯಾಪಕ ಪ್ರಚಾರ ಮಾಡುವುದು ಅವಶ್ಯವಾಗಿದೆ ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್.ಮಜೀದ್ ಮಾತನಾಡಿ, ‘ಗ್ರಾಹಕರು ಜಾಗೃತರಾಗುವುದು ತುಂಬಾ ಅವಶ್ಯವಾಗಿದೆ. ಕೇವಲ ಪ್ರಚಾರಗಳಿಂದ ವಸ್ತುಗಳನ್ನು ಖರೀದಿಸದೆ, ಅವುಗಳ ಗುಣಮಟ್ಟದ ಬಗ್ಗೆ ಜಾಗೃತ ವಹಿಸುವುದು ಮುಖ್ಯ. ಗ್ರಾಹಕರು ತಾವು ಖರೀದಿಸುವ ವಸ್ತುವಿನಲ್ಲಿ ಕಂಡು ಬರುವ ಕಳಪೆ ಗುಣಮಟ್ಟ, ಕಡಿಮೆ ಪ್ರಮಾಣ, ಶುದ್ದತೆಯಲ್ಲಿರುವ ಲೋಪ ಹಾಗೂ ಇತರೆ ದೋಷ ಕಂಡುಬಂದಲ್ಲಿ ಅದಕ್ಕೆ ಕಾರಣವಾದ ವ್ಯಕ್ತಿ ಮತ್ತು ಸಂಸ್ಥೆಯ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿ ಪರಿಹಾರ ಪಡೆಯಬಹುದಾಗಿದೆ’ ಎಂದುರ.
ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘ಗ್ರಾಹಕ ಹಕ್ಕುಗಳ ಬಗ್ಗೆ ಜಾಗೃತರಾಗಿರಬೇಕು. ಬುದ್ಧಿವಂತ ಗ್ರಾಹಕರು ದೇಶದ ಸಂಪತ್ತು. ಕಾನೂನು ಅರಿವು ಇದ್ದರೆ ಯಾರೂ ಮೋಸ ಮಾಡಲು ಸಾಧ್ಯವಿಲ್ಲ’ ಎಂದರು.
ಉಪನ್ಯಾಸಕ ಮಾರುತಿ ಎನ್. ಹರಿಜನ್ ಉಪನ್ಯಾಸ ನೀಡಿದರು.ಶಿವಾನಂದ ಗದಿಗೇರ ನಿರೂಪಣೆ ಮಾಡಿದರು. ಅಶ್ವಿನಿ ಪಾಟೀಲ್ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.