ಶಿಗ್ಗಾವಿ: ಗ್ರಾಮೀಣ ಪ್ರತಿಭೆಗಳ ಕೌಶಲಕ್ಕೆ ತಕ್ಕಂತೆ ಉದ್ಯೋಗ ಅವಕಾಶ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಜಿ.ಆರ್.ಜಿ ಮ್ಯಾನೇಜ್ಮೆಂಟ್ ಸರ್ವಿಸಸ್ ಕಂಪನಿ, ತಾಲ್ಲೂಕಿನ ಬನ್ನೂರ ಗ್ರಾಮದ ಎಜ್ಯುಕೇಷನಲ್ ವೆಲ್ಪೇರ್ ಫೌಂಡೇಷನ್ ಸಹಯೋಗದಲ್ಲಿ ಭಾನುವಾರ ‘ಹಳ್ಳಿ ಹೈದರಿಗಾಗಿ ಉದ್ಯೋಗ ಉತ್ಸವ-2025’ ಜರುಗಿತು.
ಗ್ರಾಮೀಣ ಪ್ರದೇಶದ ಸುಮಾರು 517 ನಿರೋದ್ಯೋಗಿ ಯುವಕರು ವಿವಿಧ ಉದ್ಯೋಗಕ್ಕಾಗಿ ನೋಂದಣಿ ಮಾಡುವ ಮೂಲಕ ಉದ್ಯೋಗಗಳ ಕುರಿತು ಕೌಶಲಗಳನ್ನು ಪ್ರದರ್ಶಿಸಿದರು.
ಗ್ರಾಮೀಣ ಯುವಕರ ವಿದ್ಯಾರ್ಹತೆ ಆಧಾರದ ಮೇಲೆ ಉದ್ಯೋಗಗಳನ್ನು ನೀಡುವ ಉದ್ದೇಶದಿಂದ ಪರಿಶೀಲನೆ ನಡೆಸಿದರು. ಸಂದರ್ಶನ ನೀಡಿದರು. ಗ್ರಾಮೀಣ ಯುವಕರಲ್ಲಿ ಅಡಗಿದ ಪ್ರತಿಭೆಗಳಿಗೆ ಉತ್ತಮ ಅವಕಾಶ ನೀಡಿದಾಗ ಪ್ರತಿಭೆ ಅನಾವರಣಕ್ಕೆ ಸಾಧ್ಯವಿದೆ. ಹೀಗಾಗಿ ಅರ್ಜಿಗಳನ್ನು ಪರಿಶೀಲಿಸಿ ಉದ್ಯೋಗಳ ಆಯ್ಕೆ ಕುರಿತು ಘೋಷಣೆ ಮಾಡಲಾಗುವುದು ಎಂದು ಬೆಂಗಳೂರು ಜಿ.ಆರ್.ಜಿ ಮ್ಯಾನೇಜ್ಮೆಂಟ್ ಸರ್ವಿಸಸ್ ಕಂಪನಿ ಎಂ.ಡಿ ಮಾಲತೇಶ ಎಸ್.ಜಿ ಹೇಳಿದರು.
ತಾಲ್ಲೂಕಿನ ಬನ್ನೂರ ಗ್ರಾಮದ ಎಜ್ಯುಕೇಷನಲ್ ವೆಲ್ಪೇರ್ ಫೌಂಡೇಶನ್ ಅಧ್ಯಕ್ಷ ವೀರಭದ್ರಪ್ಪ ಅಂಗಡಿ ಮಾತನಾಡಿ, ‘ನಮ್ಮ ಸಂಸ್ಥೆಯಿಂದ ಶಿಕ್ಷಣ ಮತ್ತು ಉದ್ಯೋಗಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗಿದ್ದು, ಅದರ ಪ್ರಯೋಜನ ಗ್ರಾಮೀಣ ಯುವಕರು ಪಡೆಯಬೇಕು’ ಎಂದರು.
ಶಾಸಕ ಯಾಸಿರ್ ಅಹ್ಮದಖಾನ್ ಪಠಾಣ ಉದ್ಘಾಟಿಸಿ ಮಾತನಾಡಿ, ನಗರ, ಪಟ್ಟಣಗಳ ಕಂಪನಿಗಳು ಗ್ರಾಮೀಣ ಯುವಕರ ಪ್ರತಿಭೆಗಳಿಗೆ ಬೆಳಕು ನೀಡುವ ಕಾರ್ಯ ಶ್ಲಾಘನಿಯವಾಗಿದ್ದು, ಯುವಕರು ತಮ್ಮ ಕೌಶಲಗಳನ್ನು ಹೆಚ್ಚಿಸಿಸಿಕೊಳ್ಳುವ ಮೂಲಕ ಉದ್ಯೋಗವಂತರಾಗಬೇಕು ಎಂದು ಹೇಳಿದರು.
ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿದರು. ವೀರಭದ್ರೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಕರಗೌಡ್ರ ಪೊಲೀಸಗೌಡ್ರ, ಗ್ರಾಪಂ ಅಧ್ಯಕ್ಷೆ ಗಿರೀಜವ್ವ ದೊಡ್ಮನಿ, ಮುಖಂಡರಾದ ಗುಡ್ಡಪ್ಪ ಜಲದಿ, ಎಸ್.ಎಫ್.ಮಣಕಟ್ಟಿ, ಮುಖ್ಯಶಿಕ್ಷಕ ಶ್ರೀನಿವಾಸ ಬಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಎಫ್.ವಿ.ಪೊಲೀಸಗೌಡ್ರ, ಶಿಕ್ಷಕ ಬಿ.ಆರ್.ಅಂಗಡಿ, ವಿಶ್ವನಾಥ ಚಿಕ್ಕಮಠ, ಕಲಂದರ ದೊಡ್ಮನಿ, ಬಸವರಾಜ ಮಾಯಣ್ಣವರ, ಪ್ರವೀಣ ಸಿದ್ದಣ್ಣವರ, ಜಾಫರ್ ಇಶುಮಿಯನವರ ಸೇರಿದಂತೆ ಫೌಂಡೇಷನ್ ಎಲ್ಲ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.