ಹಾವೇರಿ: ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಜಿಲ್ಲೆಯಾದ್ಯಂತ ಹಲವು ಕಡೆಗಳಲ್ಲಿ ಶನಿವಾರ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆದವು. ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ತ್ಯಾಗವನ್ನು ಸ್ಮರಿಸಿದ ಜನರು, ನಿವೃತ್ತ ಯೋಧರಿಗೆ ಸನ್ಮಾನಿಸಿದರು.
ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ನಲ್ಲಿ ‘26ನೇ ವರ್ಷದ ಕಾರ್ಗಿಲ್ ವಿಜಯ ದಿವಸ್’ ಕಾರ್ಯಕ್ರಮ ಜರುಗಿತು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಸೇನೆಯಲ್ಲಿ ಕೆಲಸ ಮಾಡಿದ್ದ ಮಹ್ಮದ್ ಜಹಾಂಗೀರ ಜಿ. ಖವಾಸ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಖವಾಸ, ‘ನಾನು ಇದೇ ಮುನ್ಸಿಪಲ್ ಹೈಸ್ಕೂಲ್ನ ಹಳೇ ವಿದ್ಯಾರ್ಥಿ. ಇಲ್ಲಿಯ ಶಿಕ್ಷಣದಿಂದಲೇ ನಾನು ಸೇನೆ ಸೇರಿದೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ದೇಶಕ್ಕಾಗಿ ಕೆಲಸ ಮಾಡಿದೆ. ಇಂದು ನನ್ನದೇ ಶಾಲೆಯಲ್ಲಿ ಸನ್ಮಾನ ಪಡೆದಿದ್ದಕ್ಕೆ ಖುಷಿಯಾಗುತ್ತಿದೆ’ ಎಂದರು.
‘ನಾನು ಲಡಾಕ್ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ, ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಪ್ರೋಕಾನ್ ಅಣು ಪರೀಕ್ಷೆ ನಡೆಸಿದ್ದರು. ನಾವಿದ್ದ ಸ್ಥಳದ ಸಮೀಪವೇ ಬಂದು ಹೋಗಿದ್ದರು. ಆದರೆ, ಅವರು ಬಂದಿದ್ದು ಯಾರಿಗೂ ಗೊತ್ತಿರಲಿಲ್ಲ. ರಕ್ಷಣಾ ವ್ಯವಸ್ಥೆಯ ರಹಸ್ಯಗಳು ಸೋರಿಕೆಯಾಗದಂತೆ ಕಾಪಾಡಬೇಕೆಂಬುದನ್ನು ಅವರಿಂದ ಕಲಿಯಬೇಕು’ ಎಂದರು.
‘ನಾವೆಲ್ಲರೂ ಭಾರತೀಯರು. ಪ್ರತಿಯೊಬ್ಬರಲ್ಲೂ ದೇಶದ ಮೇಲೆ ಅಭಿಮಾನ ಹಾಗೂ ಪ್ರೇಮ ಇರಬೇಕು. ದೇಶ ಸೇವೆಗೆ ಎಲ್ಲರೂ ಸದಾ ಸಿದ್ಧರಿರಬೇಕು’ ಎಂದು ಹೇಳಿದರು.
ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಶಿಕ್ಷಕ ಸಂಗೂರಿನ ಬಿ.ಜಿ. ಮಕಾಂದಾರ (ಬಿಸ್ಮಿಲಾ ಶಾ ಖಾದ್ರಿ), ‘ಇಂದಿನ ಮಕ್ಕಳು ಮೊಬೈಲ್ನಿಂದ ದೂರವಿದ್ದು, ಗುರುಗಳ ಸೇವೆ ಮಾಡಿ ಶಿಕ್ಷಣ ಪಡೆಯಬೇಕು. ಆಹಾರ ಸಿಗದ ಸ್ಥಳದಲ್ಲಿದ್ದುಕೊಂಡು ಜೀವದ ಹಂಗು ತೊರೆದು ದೇಶವನ್ನು ಕಾಯುವ ಸೈನಿಕರನ್ನು ಸದಾ ನೆನೆಯಬೇಕು’ ಎಂದರು.
‘ದೇಶದಲ್ಲಿ ಇದು ನನ್ನ ಧರ್ಮ, ಅದು ನನ್ನ ಧರ್ಮ ಎಂಬ ಭಾವನೆ ಸರಿಯಲ್ಲ. ಎಲ್ಲ ಧರ್ಮಗಳೂ ಒಂದೇ ಎಂಬ ಭಾವನೆ ನಮ್ಮಲ್ಲಿ ಬರಬೇಕು. ಮನಸ್ಸು ಶುದ್ಧ ಮಾಡಿಕೊಂಡು ಸಮಾಜದ ಏಳಿಗೆಗಾಗಿ ಶ್ರಮಿಸಬೇಕು’ ಎಂದು ಹೇಳಿದರು.
ಶಾಲೆ ಮುಖ್ಯ ಶಿಕ್ಷಕಿ ಶೋಭಾ ಜಾಗಟಗೇರಿ ಮಾತನಾಡಿ, ‘ಕಲಿಕೆಯ ಜೊತೆಯಲ್ಲಿ ಮಕ್ಕಳಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡಬೇಕು. ಇದೇ ಕಾರಣಕ್ಕೆ ಇಂದು ಸೈನಿಕರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳಿಗೂ ಸೇನೆ ಹಾಗೂ ದೇಶದ ಬಗ್ಗೆ ಅಭಿಮಾನ ಮೂಡಿತು’ ಎಂದರು.
ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸೈನಿಕರಾದ ಎನ್.ಎಫ್. ಜಾಧವ, ಎನ್.ವಿ. ಕೊತ್ವಾಲ, ಸಾಹಿತಿ ಸತೀಶ ಕುಲಕರ್ಣಿ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ ಇದ್ದರು.
ಬಿಜೆಪಿ ಜಿಲ್ಲಾ ಕಚೇರಿ: ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. ಮಾಜಿ ಯೋಧರನ್ನು ಸನ್ಮಾನಿಸಲಾಯಿತು.
ಮಾಜಿ ಸೈನಿಕ ಚಂದ್ರಶೇಖರ್ ಸೀಗೆಹಳ್ಳಿ ಮಾತನಾಡಿ, ‘ಕಾರ್ಗಿಲ್ ಯುದ್ಧ ಭಾರತದ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯುವ ಯುದ್ಧ. ಪಾಕಿಸ್ತಾನದ ಸೈನಿಕರು ಮೋಸದಿಂದ ಕಾರ್ಗಿಲ್ ಬೆಟ್ಟ ವಶಪಡಿಸಿಕೊಂಡಾಗ, ಭಾರತೀಯ ಸೈನಿಕರು ಪಾಕಿಸ್ತಾನದ ಸೈನಿಕರನ್ನು ಎದುರಿಸಿ ಕಾರ್ಗಿಲ್ ಬೆಟ್ಟವನ್ನು ಮರಳಿ ಪಡೆಯಿತು. ಪಾಕಿಸ್ತಾನದ ಕುತಂತ್ರ ಬುದ್ಧಿಯನ್ನು ಇಡೀ ವಿಶ್ವಕ್ಕೆ ತೋರ್ಪಡಿಸಿತು’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ‘ಪಾಕಿಸ್ತಾನದ ನೀಚ ಬುದ್ಧಿಗೆ ಅಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಕಾರ್ಗಿಲ್ ಯುದ್ಧದ ಮೂಲಕ ತಕ್ಕ ಉತ್ತರ ನೀಡಿದರು. ಅಂದು ಯುದ್ಧದಲ್ಲಿ 542 ಭಾರತೀಯ ಸೈನಿಕರು ಹುತಾತ್ಮರಾದರು. ಇಂದು ಭಾರತೀಯ ಸೇನೆ ಬಲಿಷ್ಠ ಸೇನೆಯಾಗಿದೆ’ ಎಂದರು.
ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಟಿ.ಎಸ್. ಪಾಟೀಲ, ಎಸ್.ವಿ. ಕರಮಡಿ, ಶಿವಪುತ್ರಪ್ಪ ಕಡ್ಲಿ, ಗಿರೀಶ್ ತುಪ್ಪದ, ಬಸವರಾಜ್ ಕಳಸೂರ, ಸಂತೋಷ್ ಆಲದಕಟ್ಟಿ, ನಂಜುಂಡೇಶ್ ಕಳ್ಳೇರ, ಪರಮೇಶ್ವರಪ್ಪ ಮೇಗಳಮನಿ ಇದ್ದರು.
ಶಿವಲಿಂಗೇಶ್ವರ ಮಹಿಳಾ ಕಾಲೇಜು: ಹುಕ್ಕೇರಿಮಠದ ಶಿವಲಿಂಗೇಶ್ವರ ಮಹಿಳಾ ಕಾಲೇಜಿನಲ್ಲಿ ಮೇರಾ ಯುವ ಭಾರತ ಸಂಸ್ಥೆ ವತಿಯಿಂದ ‘ಕಾರ್ಗಿಲ ವಿಜಯ ದಿವಸ’ ಆಚರಿಸಲಾಯಿತು.
ಮಾಜಿ ಸೈನಿಕ ಚಂದ್ರಶೇಖರ ಸೀಗೆಹಳ್ಳಿ, ಪ್ರಾಂಶುಪಾಲರಾದ ಸವಿತಾ ಹಿರೇಮಠ, ಭುಕ್ಯಾ ಸಂಜೀವ, ಗಣೇಶ ರಾಯ್ಕರ, ಡಾ. ಉಮಾ ಬಳಿಗಾರ, ವನಿತಾ ಮಾಗನೂರ, ಶೋಭಾ ತಾಂಡೂರ ಇದ್ದರು.
ಹಾವೇರಿ ವಿಶ್ವವಿದ್ಯಾಲಯ: ಕೇರಿಮತ್ತಿಹಳ್ಳಿಯಲ್ಲಿರುವ ಹಾವೇರಿ ವಿಶ್ವವಿದ್ಯಾಲಯದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ಹುಬ್ಬಳ್ಳಿಯ ಎನ್ಸಿಸಿ ಕಮಾಂಡಿಂಗ್ ಅಧಿಕಾರಿ ವಿನ್ಸೆಂಟ್ ಜೋಹರ್ ಮಾತನಾಡಿ, ‘ಯೋಧರ ಬಲಿದಾನವನ್ನು ನಾವೆಲ್ಲರೂ ಪ್ರತಿನಿತ್ಯ ಸ್ಮರಿಸಬೇಕು. ದೇಶದ ಸೈನಿಕರನ್ನು ಗೌರವದಿಂದ ಕಾಣಬೇಕು’ ಎಂದರು.
ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ, ಉಪ ಕುಲಸಚಿವ ಮನೋಹರ ಕೋಳಿ, ರವೀಂದ್ರಕುಮಾರ ಬಣಕಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.