ಸವಣೂರ: ದಸರಾ ಹಬ್ಬದ ಅಂಗವಾಗಿ ತಾಲ್ಲೂಕಿನ ಕಾರಡಗಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ಮಹಾರುದ್ರಾಭಿಷೇಕ, ರಾತ್ರಿ ಬನ್ನಿ ಮುಡಿಯುವ ಕಾರ್ಯಕ್ರಮ ನಂತರ, ಕಾರ್ಣಿಕೋತ್ಸವ ನಡೆಯಿತು.
‘ಆಕಾಶದೊಳಗಿರುವ ಮುತ್ತಿನರಾಶಿ ದುಂಡಗಾಗಿ ಮೂರುಭಾಗ ಆಯಿತಲೆ ಬಹುಪರಾಕ್’ ಎಂದು ಈರಣ್ಣ ಚನ್ನವೀರಪ್ಪ ಬಡಗೇರಿ ಅವರು ಪ್ರಥಮ ಬಾರಿ ಕಾರ್ಣಿಕ ನುಡಿದರು.
40 ವರ್ಷಗಳಿಂದ ಕಾರ್ಣಿಕ ನುಡಿಯುತ್ತಿದ್ದ ಕಾರಡಗಿ ಗ್ರಾಮದ ನಿಂಗಣ್ಣರಾವ್ ಕುಲಕರ್ಣಿ ಅವರು ಇತ್ತೀಚೆಗೆ ನಿಧನರಾಗಿದ್ದಾರೆ. ಈ ಬಾರಿ ಕಾರ್ಣಿಕ ನುಡಿಯಲು ಅವತಾರ ಪುರುಷ ಶ್ರೀವೀರಭದ್ರೇಶ್ವರ ಯಾರ ಮೈಯಲ್ಲಿ ಬರುತ್ತಾನೆ ಎಂದು ಭಕ್ತರು ಕಾಯ್ದು ಕುಳಿತ್ತಿದ್ದರು. ರಾತ್ರಿ ಒಂಬತ್ತಕ್ಕೆ ಆರಂಭವಾಗುತ್ತಿದ್ದ ಕಾರ್ಣಿಕ, ಈ ಬಾರಿ 11.45 ಆದರೂ ಶ್ರೀವೀರಭದ್ರೇಶ್ವರ ಯಾರ ಮೈಯಲ್ಲೂ ಕಂಡು ಬಂದಿಲ್ಲ. ಆ ವೇಳೆ ಹಾನಗಲ್ ತಾಲ್ಲೂಕಿನ ಹರನಗೇರಿ ಗ್ರಾಮದ ಈರಣ್ಣ ಬಡಗೇರಿ ಅವರು ಕಾರ್ಣಿಕ ನುಡಿದರು.
ಪ್ರತಿ ವರ್ಷದಂತೆ ಬೆತ್ತಸೇವೆ, ಬನ್ನಿ ಮುಡಿದು ನಂದಿಕೋಲು ಹಾಗೂ ಸಮ್ಯಾಳ ಮೆರವಣಿಗೆ ಮೂಲಕ ರಥ ಬೀದಿಯಲ್ಲಿ ಹಾಯ್ದು ಪಾದಗಟ್ಟಿ ತುದಿಯಲ್ಲಿ ನಿಂತ ಈರಣ್ಣ ಅವರು ಕಾರ್ಣಿಕ ನುಡಿದರು. ಒಳಿತು ಹಾಗೂ ಕೆಡಕುಗಳು ಸರಿಸಮನಾಗಿ ಹಂಚಿಕೆಯಾಗಲಿವೆ. ಮಳೆ ಮುಂದುವರಿಯುವ ಲಕ್ಷಣಗಳನ್ನು ವೀರಭದ್ರೇಶ್ವರ ದೇವರ ಕಾರ್ಣಿಕ ತಿಳಿಸುತ್ತದೆ ಎಂದು ಕಾರ್ಣಿಕವನ್ನು ಭಕ್ತರು ವಿಶ್ಲೇಷಿಸಿದರು. ದೇವಸ್ಥಾನ ಆಡಳಿತ ಮಂಡಳಿ ನಿರ್ದೇಶಕರು, ಗ್ರಾಮಸ್ಥರು, ಭಕ್ತರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.