ADVERTISEMENT

ಅಸ್ಪೃಶ್ಯತೆ ನಿವಾರಣೆಗೆ ಜಾಗೃತಿ ಕೊರತೆ: ಎಸ್.ಜಿ. ಹೊನ್ನಪ್ಪನವರ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 14:42 IST
Last Updated 22 ಸೆಪ್ಟೆಂಬರ್ 2021, 14:42 IST
ಹಾವೇರಿ ಜಿಲ್ಲಾ ವಾರ್ತಾ ಭವನದಲ್ಲಿ ಬುಧವಾರ ನಡೆದ ಅಸ್ಪೃಶ್ಯತಾ ನಿವಾರಣೆ ಕುರಿತ ನಾಟಕ ರಚನಾ ತರಬೇತಿ ಶಿಬಿರದಲ್ಲಿ ವಕೀಲ ಎಸ್.ಜಿ. ಹೊನ್ನಪ್ಪನವರ ಮಾತನಾಡಿದರು 
ಹಾವೇರಿ ಜಿಲ್ಲಾ ವಾರ್ತಾ ಭವನದಲ್ಲಿ ಬುಧವಾರ ನಡೆದ ಅಸ್ಪೃಶ್ಯತಾ ನಿವಾರಣೆ ಕುರಿತ ನಾಟಕ ರಚನಾ ತರಬೇತಿ ಶಿಬಿರದಲ್ಲಿ ವಕೀಲ ಎಸ್.ಜಿ. ಹೊನ್ನಪ್ಪನವರ ಮಾತನಾಡಿದರು    

ಹಾವೇರಿ: ‘ಅಸ್ಪೃಶ್ಯತಾ ನಿವಾರಣೆಗಾಗಿ ಜಾರಿಗೊಳಿಸಲಾದ ಕಾಯ್ದೆಗಳು, ನಿಯಮಾವಳಿಗಳು, ಸರ್ಕಾರದ ಯೋಜನೆಗಳನ್ನು ನಾಟಕ ಮಾಧ್ಯಮಗಳ ಮೂಲಕ ಜನರಿಗೆ ತಲುಪಿಸುವಲ್ಲಿ ನಾಟಕ ರಚನಾಕಾರರ ಪಾತ್ರ ಪ್ರಮುಖವಾಗಿದೆ’ ಎಂದು ವಕೀಲ ಎಸ್.ಜಿ. ಹೊನ್ನಪ್ಪನವರ ಅಭಿಪ್ರಾಯಪಟ್ಟರು.

‌ನಗರದ ಜಿಲ್ಲಾ ವಾರ್ತಾ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಬುಧವಾರ ನಡೆದ ಅಸ್ಪೃಶ್ಯತಾ ನಿವಾರಣೆ ಕುರಿತು ನಾಟಕ ರಚನಾ ತರಬೇತಿ ಶಿಬಿರದಲ್ಲಿ ಅಸ್ಪೃಶ್ಯತಾ ನಿವಾರಣಾ ಕಾಯ್ದೆಗಳ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು.

ಅಸ್ಪೃಶ್ಯತೆ ನಿವಾರಣೆಗೆ ಹಲವು ಕಾಯ್ದೆಗಳನ್ನು ರೂಪಿಸಲಾಗಿದೆ. ಈ ಕಾಯ್ದೆಗಳು ನಿಯಮಾವಳಿಗಳ ಕುರಿತಂತೆ ಸಾಮಾನ್ಯರಿಗೆ ಸರಿಯಾದ ಮಾಹಿತಿ ಜಾಗೃತಿ ಇಲ್ಲದ ಕಾರಣ ಅಸ್ಪೃಶ್ಯತೆಯನ್ನು ಇಂದಿಗೂ ಕಾಣಬಹುದು. ಈ ಕಾಯ್ದೆಗಳ ಕುರಿತಂತೆ ನಾಟಕ ಒಳಗೊಂಡತೆ ವಿವಿಧ ಕಲಾ ಮಾಧ್ಯಮಗಳ ಮೂಲಕ ಸ್ಥಳೀಯ ಭಾಷೆಗಳಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ಉತ್ತಮ ಸಮಾಜದ ನಿರ್ಮಾಣಕ್ಕಾಗಿ ನಿಮ್ಮ ನಾಟಕಗಳು ಮಾದರಿಯಾಗಬೇಕು ಎಂದು ಕಾರ್ಯಾಗಾರದಲ್ಲಿ ಭಾಗವಹಿಸಿದ ಲೇಖಕರಿಗೆ ಸಲಹೆ ನೀಡಿದರು.

ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಮಾತನಾಡಿ, ಕಡಿಮೆ ಸಮಯದಲ್ಲೇ ಸಾಕಷ್ಟು ವಿಚಾರಗಳು ಜನರಿಗೆ ತಲುವಂತೆ ನಾಟಕಗಳನ್ನು ರಚಿಸಬೇಕು. ಪ್ರೇಕ್ಷಕರಿಗೆ ಹೊಸತನ ಎನ್ನುವಂತೆ ನಾಟಕಗಳನ್ನು ಪ್ರಚುರಪಡಿಸಬೇಕು ಎಂದು ಹೇಳಿದರು.

ಸಾಹಿತಿ ಸತೀಶ ಕುಲಕರ್ಣಿ ಹಾಗೂ ಶಿಬಿರಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.