ADVERTISEMENT

‘ಸಂಘರ್ಷ ಬಿಡಿ, ಸಾಮರಸ್ಯ ಸಾಧಿಸಿ’

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 14:39 IST
Last Updated 3 ಏಪ್ರಿಲ್ 2021, 14:39 IST
ಹಾವೇರಿ ನಗರದ ಹೊಸಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಶರಣ ಸಂಗಮ’ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡಿದರು 
ಹಾವೇರಿ ನಗರದ ಹೊಸಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಶರಣ ಸಂಗಮ’ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡಿದರು    

ಹಾವೇರಿ: ‘ಧರ್ಮ ಮತ್ತು ಜಾತಿಗಳ ಮಧ್ಯೆ ಸಂಘರ್ಷ ಹೆಚ್ಚುತ್ತಿದೆ. ಪ್ರೀತಿ, ಕರುಣೆ, ವಾತ್ಸಲ್ಯದಿಂದ ಶಾಂತಿ ಮತ್ತು ಸಾಮರಸ್ಯ ಸಾಧಿಸಲು ಸಾಧ್ಯ’ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಹೊಸಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಶರಣ ಸಂಗಮ’ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರಕೃತಿಯೊಂದಿಗೆ ಸಂಘರ್ಷಕ್ಕೆ ಇಳಿದರೆ ನಮಗೆ ನಷ್ಟವಾಗುತ್ತದೆ. ಆದುದರಿಂದ ಮಾನವನು ಪರಿಸರದ ಜೊತೆ ಹೊಂದಾಣಿಕೆ ಸಾಮರಸ್ಯದಿಂದ ಸಾಗಬೇಕಿದೆ. ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತದ್ದು. ಇಡೀ ವಿಶ್ವಕ್ಕೆ ಶಾಂತಿ ಮತ್ತು ಸೌಹಾರ್ದದ ಸಂದೇಶವನ್ನು ಮೊದಲಿನಿಂದಲೂ ಸಾರುತ್ತಾ ಬಂದಿದೆ ಎಂದರು.

ADVERTISEMENT

12ನೇ ಶತಮಾನದಲ್ಲಿ ನಡೆದ ಜನಪರ ಆಂದೋಲನದ ನೇರ ಧ್ವನಿಯಾದ ‘ವಚನ ಸಾಹಿತ್ಯ'ದಲ್ಲಿ ಕೇವಲ ಶರಣರು ಅಷ್ಟೇ ಅಲ್ಲ ಶರಣೆಯರೂ ತಮ್ಮ ಧ್ವನಿಗೂಡಿಸಿದ್ದಾರೆ.ಹೆಣ್ಣು ಆರ್ಯ ಸಂಸ್ಕೃತಿಯ ಪ್ರಭಾವದಿಂದ ತನ್ನೆಲ್ಲಾ ಸ್ವಾತಂತ್ರ್ಯವನ್ನು ಕಳೆದುಕೊಂಡು ಪರಾವಲಂಬಿಯಾಗಿ ನಿಯಮ, ನಿಬಂಧನೆಗಳ ಶೃಂಖಲೆಯಲ್ಲಿ ಬಂಧಿತಳಾಗಿದ್ದಳು. ಇಂತಹ ಶೋಚನೀಯ ಸಂದರ್ಭದಲ್ಲಿ 12ನೇ ಶತಮಾನದಲ್ಲಿ ಗಣನೀಯ ಸಂಖ್ಯೆಯಲ್ಲಿ ಮಹಿಳೆಯರು ವಿಚಾರ ಸ್ವಾತಂತ್ರ್ಯ ಪಡೆದು ವಚನ ರೂಪದಲ್ಲಿ ಅಭಿವ್ಯಕ್ತಿಸಿದ್ದನ್ನು ಕಾಣುತ್ತೇವೆ ಎಂದು ಹೇಳಿದರು.

ರಾಣೆಬೆನ್ನೂರಿನ ಬಿ.ಎ.ಜೆ.ಎಸ್.ಎಸ್ ಮಹಾವಿದ್ಯಾಲಯದ ಪ್ರೊ.ಕಾಂತೇಶ ಅಂಬಿಗರ ಉಪನ್ಯಾಸ ನೀಡಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ನೂತನವಾಗಿ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾದ ಡಾ.ರಮೇಶ ತೆವರಿ ಅವರನ್ನು ಸನ್ಮಾನಿಸಲಾಯಿತು. ಗಾಳೆಮ್ಮನವರು ಇದ್ದರು. ಎನ್. ರೋಡಣ್ಣ ನಿರೂಪಿಸಿದರು. ಹೊಸಮಠದ ಅಕ್ಕಮಹಾದೇವಿ ಮಹಿಳಾ ಬಳಗದವರು ವಚನ ಪ್ರಾರ್ಥನೆ‌ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.