ಹಾವೇರಿ:ಸಿ.ಟಿ. ರವಿಗೆ ಸ್ವಲ್ಪ ಬದ್ಧತೆ ಇದ್ರೆ, ಅವರ ಸರ್ಕಾರದ ತಪ್ಪುಗಳ ಬಗ್ಗೆ ಪ್ರಶ್ನೆ ಮಾಡುವ ಧೈರ್ಯ ಮಾಡಲಿ. ಶೇ 40ರಷ್ಟು ಕಮಿಷನ್, ಬೆಲೆ ಏರಿಕೆ ಮುಂತಾದವುಗಳ ಬಗ್ಗೆ ಮಾತನಾಡಲಿ. ಬಾಲಿಶ ಹೇಳಿಕೆ ಮೂಲಕ ಸಮಾಜ ಕದಡುವ ಯತ್ನ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್ ತಿರುಗೇಟು ನೀಡಿದರು.
ನಗರದಲ್ಲಿ ಸೋಮವಾರ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ನಿರ್ಮಾಣ ಭೂಮಿಪೂಜೆಯಲ್ಲಿ ಪಾಲ್ಗೊಂಡಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಸಿದ್ರಮುಲ್ಲಾಖಾನ್ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿ.ಟಿ ರವಿ ಅಭಿವೃದ್ಧಿ ಕಡೆ ಗಮನ ಹರಿಸಲಿ ಎಂದರು.
‘ಮಹಾರಾಷ್ಟ್ರದ ಸಚಿವರು ಬೆಳಗಾವಿಗೇ ಬರ್ತೀವಿ ಅಂತ ಚಾಲೆಂಜ್ ಮಾಡ್ತಾರೆ.ಕೇಂದ್ರ, ಕರ್ನಾಟಕ ಮತ್ತು ಮಹಾರಾಷ್ಟ್ರ ಈ ಮೂರು ಕಡೆ ಬಿಜೆಪಿ ಸರ್ಕಾರ ಇದೆ. ಗಡಿ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳೋಕೆ ಬಿಜೆಪಿ ಪ್ರಯತ್ನ ಮಾಡುತ್ತಿದೆ.ಸಿಎಂ ಜೊತೆ ನಾವೆಲ್ಲಾ ಇದ್ದೇವೆ.ಸಿಎಂ ಖಡಕ್ಕಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ಹೇಳುವ ಧೈರ್ಯ ತೋರಲಿ ಎಂದು ಹೇಳಿದರು.
ಶ್ರೀರಂಗಪಟ್ಟಣದಲ್ಲಿಮಸೀದಿ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ,ಗೊತ್ತು ಗುರಿ ಇಲ್ಲದ ಬೇಜವಾಬ್ದಾರಿ ಸರ್ಕಾರ ಇದು.ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ.ಶಾಂತಿ ನೆಮ್ಮದಿ ಕಾಪಾಡುವ ದೊಡ್ಡ ಹೊಣೆ ಸರ್ಕಾರದ ಮೇಲಿದೆ ಎಂದರು.
ಓಟರ್ ಐಡಿ ಗೋಲ್ ಮಾಲ್ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಹುಬ್ಬಳ್ಳಿಯಲ್ಲಿಯೂ ಆರೋಪಿಗಳನ್ನು ಹಿಡಿದಿದ್ದಾರೆ. ಹಾವೇರಿ ಜಿಲ್ಲೆಯಲ್ಲೂ ಕೂಡಾ ಆಗಿದೆ. ಬಿಜೆಪಿಯವರಿಗೆ ಸೋಲಿನ ಭೀತಿ ಎದುರಾಗಿದೆ. ಹತಾಶೆಯಿಂದ ಹೀಗೆ ಮಾಡುತ್ತಾ ಇದ್ದಾರೆ.ಈಗಾಗಲೇ ಕಾಂಗ್ರೆಸ್ನಿಂದ ಈ ಬಗ್ಗೆ ದೂರು ನೀಡಿದ್ದೇವೆ.ಈ ಬಗ್ಗೆ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.